ನವದೆಹಲಿ: ಸ್ಫೋಟಕಗಳ ಸಹಿತ ಐಎಸ್ಐಎಸ್ ಉಗ್ರನೊಬ್ಬನನ್ನು ದೆಹಲಿಯಲ್ಲಿ ಬಂಧಿಸಿದ ಬಳಿಕ ಉತ್ತರ ಪ್ರದೇಶದ ನೊಯ್ಡಾದಲ್ಲಿ ಭದ್ರತಾ ತಪಾಸಣೆ ತೀವ್ರಗೊಳಿಸಲಾಗಿದೆ.
ದೆಹಲಿಯಿಂದ ಬರುತ್ತಿರುವ ಮತ್ತು ಅಲ್ಲಿಗೆ ತೆರಳುತ್ತಿರುವ ಎಲ್ಲ ವಾಹನಗಳು, ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಗೌತಮ ಬುದ್ಧ ನಗರ ಜಿಲ್ಲೆಯಲ್ಲೂ ಕಟ್ಟೆಚ್ಚರ ಘೋಷಿಸಲಾಗಿದೆ ಎಂದು ನೊಯ್ಡಾ ಪೊಲೀಸ್ ಆಯುಕ್ತ ರಾಜೇಶ್ ಎಸ್ ಹೇಳಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಗಳು ಸಹ ದೆಹಲಿ ಗಡಿಯಲ್ಲಿ ಭದ್ರತಾ ಪರಿಶೀಲನೆ ನಡೆಸಿದ್ದಾರೆ.
ಸ್ಫೋಟಕಗಳನ್ನು ಹೊಂದಿದ್ದ ಐಎಸ್ಐಎಸ್ ಉಗ್ರ, ಉತ್ತರ ಪ್ರದೇಶದ ಮೂಲದ ಅಬ್ದುಲ್ ಯೂಸೂಫ್ ಖಾನ್ ಎಂಬಾತನನ್ನು ದೆಹಲಿಯಲ್ಲಿ ಶುಕ್ರವಾರ ರಾತ್ರಿ ಬಂಧಿಸಲಾಗಿತ್ತು. ದೆಹಲಿಯ ರಿಡ್ಜ್ ರಸ್ತೆಯ ಬುದ್ಧ ಜಯಂತಿ ಪಾರ್ಕ್ ಬಳಿ ರಾತ್ರಿ ನಡೆದ ಗುಂಡಿನ ಚಕಮಕಿಯ ನಂತರ ಆತನನ್ನು ಬಂಧಿಸಲಾಗಿತ್ತು.