ಮುಂಬೈ: ‘ಮಂದಿರ ನಿರ್ಮಾಣವು ಕೋವಿಡ್–19 ನಿರ್ಮೂಲನೆಗೆ ಸಹಾಯ ಮಾಡುತ್ತದೆ ಎಂದು ಕೆಲವರು ಭಾವಿಸಿದ್ದಾರೆ’ ಎಂದು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಭಾನುವಾರ ಹೇಳಿದ್ದಾರೆ.
ಆಗಸ್ಟ್ 3 ಅಥವಾ 5ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಬಹುದು ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಸೂಚಿಸಿದ ಬೆನ್ನಲ್ಲೇಶರದ್ ಪವಾರ್ ಈ ಹೇಳಿಕೆ ನೀಡಿದ್ದಾರೆ.
ಶ್ರೀರಾಮಮಂದಿರದ ಶಂಕುಸ್ಥಾಪನೆಗಾಗಿ ಟ್ರಸ್ಟ್ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಿದೆ.
‘ಕೋವಿಡ್ ನಿರ್ಮೂಲನೆ ಮಾಡುವುದು ಮಹಾರಾಷ್ಟ್ರ ಸರ್ಕಾರದ ಆದ್ಯತೆಯಾಗಿದೆ. ಆದರೆ, ಕೆಲ ಜನರು ಮಂದಿರ ನಿರ್ಮಾಣವು ಕೋವಿಡ್ ಪ್ರಸರಣ ತಗ್ಗಿಸಲು ಸಹಾಯ ಮಾಡುತ್ತದೆ ಎಂದು ಭಾವಿಸಿದ್ದಾರೆ’ ಎಂದು ಅವರು ಸೊಲ್ಲಾಪುರದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
‘ರಾಮರಾಜ್ಯ’ದ ಪರಿಕಲ್ಪನೆ
ಈ ನಡುವೆ ‘ಶ್ರೀರಾಮ ನಮ್ಮ ಪಕ್ಷದ ನಂಬಿಕೆಯ ವಿಷಯ. ಇದನ್ನು ಯಾವುದೇ ಕಾರಣಕ್ಕೂ ರಾಜಕೀಯಗೊಳಿಸಲು ಇಚ್ಛಿಸುವುದಿಲ್ಲ. ಕೊರೊನಾ ವಿರುದ್ಧದ ಹೋರಾಟದಲ್ಲಿ ಮಹಾರಾಷ್ಟ್ರ ಸರ್ಕಾರ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ’ ಎಂದು ದಕ್ಷಿಣ ಮುಂಬೈನ ಶಿವಸೇನಾ ಸಂಸದ ಅರವಿಂದ ಸಾವಂತ್ ಹೇಳಿದ್ದಾರೆ.
‘ರಾಮ ಮಂದಿರ ನಿರ್ಮಾಣ ಚಳವಳಿಯಲ್ಲಿ ಶಿವಸೇನಾ ಮುಂಚೂಣಿ ವಹಿಸಿತ್ತು. ಸೇನಾದ ಅಧ್ಯಕ್ಷ ಉದ್ಧವ್ ಠಾಕ್ರೆ ಅವರು ಮುಖ್ಯಮಂತ್ರಿಯಾಗುವ ಮುನ್ನ ಮತ್ತು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕವೂ ಅಯೋಧ್ಯೆಗೆ ಭೇಟಿ ನೀಡಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.