ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ಕೆ. ರತ್ನಪ್ರಭಾ ಅವರು ಈ ಮೂರೂ ಅಂಶಗಳ ಕುರಿತ ಅಧ್ಯಯನ ನಡೆಸಿ, ಬಡ್ತಿಯಲ್ಲಿ ಮೀಸಲಾತಿ ನೀಡಿರುವುದನ್ನು ಸಮರ್ಥಿಸಿ ವರದಿ ಸಲ್ಲಿಸಿದ್ದರು. ಬಡ್ತಿಯಲ್ಲಿ ಮೀಸಲಾತಿಯನ್ನು ವಿಸ್ತರಿಸುವುದರಿಂದ ಆಡಳಿತದಲ್ಲಿನ ಸಮಗ್ರ ದಕ್ಷತೆಗೆ ಅಡ್ಡಿ ಆಗುವುದಿಲ್ಲ ಎಂದೂ ಅವರು ಅಭಿಪ್ರಾಯಪಟ್ಟಿದ್ದರು. ಬಳಿಕ ರಾಜ್ಯ ಸರ್ಕಾರ, ಕಾನೂನು ತಜ್ಞರು ಮತ್ತು ರಾಜ್ಯ ಕಾನೂನು ಆಯೋಗದ ಅಭಿಪ್ರಾಯ ಪಡೆದು ಮಸೂದೆ ಸಿದ್ಧಪಡಿಸಿತ್ತು. ಅದಕ್ಕೆ, ರಾಷ್ಟ್ರಪತಿ ಒಪ್ಪಿಗೆ ಪಡೆದು, ಕಾಯ್ದೆ ರಚಿಸಲಾಗಿದೆ.