ಅಮರಾವತಿ: ಆಂಧ್ರ ಪ್ರದೇಶದ ತೆಲುಗು ದೇಶಂ ಪಕ್ಷವು(ಟಿಡಿಪಿ) ಎನ್ಡಿಎ ಮೈತ್ರಿಕೂಟಕ್ಕೆ ಸೇರ್ಪಡೆಯಾಗಲಿದೆ ಎಂಬ ಊಹಾಪೋಹಗಳ ನಡುವೆ ಪಕ್ಷದ ವರಿಷ್ಠ ಚಂದ್ರಬಾಬು ನಾಯ್ಡು ಗುರುವಾರ ಹೈದರಾಬಾದ್ನಿಂದ ದೆಹಲಿಗೆ ತೆರಳಿದ್ದಾರೆ.
ನಾಯ್ಡು, ಬಿಜೆಪಿ ವರಿಷ್ಠರನ್ನು ಭೇಟಿ ಮಾಡುವ ಮೂಲಕ ಚುನಾವಣಾ ಪೂರ್ವ ಮೈತ್ರಿ ಮತ್ತು ಸೀಟು ಹಂಚಿಕೆ ಬಗ್ಗೆ ಚರ್ಚಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳು ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಬಿಜೆಪಿ ವರಿಷ್ಠರ ಭೇಟಿಗೆ ನಾಯ್ಡು ಅವರು ದೆಹಲಿಗೆ ತೆರಳುತ್ತಿರುವುದು ಎರಡನೇ ಬಾರಿಯಾಗಿದೆ.
ಆಂಧ್ರ ಪ್ರದೇಶದ ಬಿಜೆಪಿ ಘಟಕದ ಅಧ್ಯಕ್ಷರಾದ ಡಿ. ಪುರಂದೇಶ್ವರಿ ಈಗಾಗಲೇ ರಾಷ್ಟ್ರ ರಾಜಧಾನಿಯಲ್ಲಿ ಬೀಡುಬಿಟ್ಟಿದ್ದಾರೆ.
‘ಚುನಾವಣೆ ಅಧಿಸೂಚನೆಗೆ ಬಹಳ ಸಮಯ ಉಳಿದಿಲ್ಲ. ಹೀಗಾಗಿ, ಈ ಭೇಟಿಯಲ್ಲೇ ಮೈತ್ರಿ ಕುರಿತ ನಿರ್ಧಾರ ಅಂತಿಮಗೊಳ್ಳುವ ಸಾಧ್ಯತೆ ಇದೆ. ಮೈತ್ರಿ ಕುರಿತ ಸ್ಪಷ್ಟನೆಗಾಗಿ ಕಾಯುತ್ತಿದ್ದೇವೆ’ ಎಂದು ಟಿಡಿಪಿ ಮೂಲಗಳು ತಿಳಿಸಿವೆ.
ನಾಯ್ಡು ಅವರು ಇಂದೇ ಅಮಿತ್ ಶಾ ಅವರನ್ನು ಭೇಟಿಯಾಗುವ ಸಾಧ್ಯತೆ ಇದೆ ಎಂದೂ ಮೂಲಗಳು ತಿಳಿಸಿವೆ.
ಇಂದು ರಾತ್ರಿ ಜನಸೇನಾ ಅಧ್ಯಕ್ಷ ಪವನ್ ಕಲ್ಯಾಣ್ ಸಹ ದೆಹಲಿಗೆ ತೆರಳುವ ಸಾಧ್ಯತೆ ಇದ್ದು, ಅವರು ನಾಯ್ಡು ಅವರನ್ನು ಸೇರಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ಇತ್ತೀಚೆಗೆ, ಜನಸೇನಾ ಮತ್ತು ಟಿಡಿಪಿ ಪಕ್ಷಗಳು 119 ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದವು.
ಆಂಧ್ರ ಪ್ರದೇಶದಲ್ಲಿ 175 ವಿಧಾನಸಭಾ ಕ್ಷೇತ್ರಗಳು ಮತ್ತು 25 ಲೋಕಸಭಾ ಕ್ಷೇತ್ರಗಳಿವೆ. ನಾಯ್ಡು ಕುಪ್ಪಂನಿಂದ ಸ್ಪರ್ಧಿಸಲಿದ್ದು, ಪವನ್ ಕಲ್ಯಾಣ್ ಸ್ಪರ್ಧಿಸುವ ಕ್ಷೇತ್ರ ಅಂತಿಮಗೊಂಡಿಲ್ಲ.