ಹೈದರಾಬಾದ್: ‘ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆ ವಿರುದ್ಧ ಮತ ಚಲಾಯಿಸಿದ ಏಕೈಕ ಪಕ್ಷವೆಂದರೆ ಅದು ಎಐಎಂಐಎಂ. ಇಂತಹ ಪಕ್ಷದ ಜೊತೆ ಬಿಆರ್ಎಸ್ ಹೇಗೆ ಸ್ನೇಹವನ್ನು ಉಳಿಸಿಕೊಂಡಿದೆ?’ ಎಂದು ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ಜಿ. ಕಿಶನ್ ರೆಡ್ಡಿ ಕೇಳಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕಿಶನ್ ರೆಡ್ಡಿ, ‘ಹಲವು ದಶಕಗಳಿಂದ ಮಹಿಳಾ ಮೀಸಲಾತಿ ಬಗ್ಗೆ ಚರ್ಚೆಯಾಗುತ್ತಿದೆ. ಆದರೆ ಅದಕ್ಕೊಂದು ತಾರ್ಕಿಕ ಅಂತ್ಯ ನೀಡಲು ಯಾವುದೇ ಪಕ್ಷದ ನಾಯಕರಿಗೂ ಸಾಧ್ಯವಾಗಿರಲಿಲ್ಲ. ಅದನ್ನು ಬಿಜೆಪಿ ಮಾಡಿದೆ’ ಎಂದರು.
ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಅವರನ್ನು ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ‘ಗುರು’ ಎಂದು ಕರೆದ ರೆಡ್ಡಿ, ‘ಮಹಿಳಾ ವಿರೋಧಿ ಪಕ್ಷದ ಜೊತೆ ಚಂದ್ರಶೇಖರ್ ರಾವ್ ಹೇಗೆ ಕಾರ್ಯನಿರ್ವಹಿಸಲಿದ್ದಾರೆ ಎಂದು ಜನರಿಗೆ ಉತ್ತರಿಸಬೇಕು’ ಎಂದು ಒತ್ತಾಯಿಸಿದರು.
‘ತೆಲಂಗಾಣದ ಮೂವರು ಕಾಂಗ್ರೆಸ್ ಸಂಸದರು ಕೂಡ ಮಹಿಳಾ ಮೀಸಲಾತಿ ಮಸೂದೆಯ ಮೇಲಿನ ಮತದಾನದಲ್ಲಿ ಭಾಗವಹಿಸಲಿಲ್ಲ. ಎಐಎಂಐಎಂ ಮತ್ತು ಮೂವರು ಕಾಂಗ್ರೆಸ್ ಸಂಸದರು ತೆಲಂಗಾಣದವರೇ ಆಗಿರುವುದು ನಾಚಿಕೆಗೇಡಿನ ಸಂಗತಿ’ ಎಂದು ಹೇಳಿದರು.
‘ಕಳೆದ ಒಂಬತ್ತು ವರ್ಷಗಳಲ್ಲಿ ತೆರಿಗೆ ವಿನಾಯಿತಿ, 370ನೇ ವಿಧಿ, ರಾಮ ಜನ್ಮಭೂಮಿ ಮತ್ತು ಬಡವರಿಗೆ ಶೌಚಾಲಯ ನಿರ್ಮಾಣ ಸೇರಿದಂತೆ ಬಾಕಿ ಉಳಿದಿರುವ ಹಲವು ವಿಷಯಗಳಿಗೆ ಪ್ರಧಾನಿ ನರೇಂದ್ರ ಮೋದಿ ಕ್ರಾಂತಿಕಾರಿ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ’ ಎಂದು ಹೇಳಿದರು.