ಶ್ರೀನಗರ:ಭಯೋತ್ಪಾದನೆಗೆ ಹಣಕಾಸು ನೆರವು ನೀಡುತ್ತಿರುವ ಆರೋಪ ಸಂಬಂಧ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್ಐಎ) ಮಂಗಳವಾರ ಧರ್ಮ ಬೋಧಕರ ನಿವಾಸ ಸೇರಿ ಜಮ್ಮು–ಕಾಶ್ಮೀರದ ಹಲವು ಕಡೆ ಶೋಧ ಕಾರ್ಯಾಚರಣೆ ನಡೆಸಿತು.
ಪೊಲೀಸರು ಮತ್ತು ಸಿಆರ್ಪಿಎಫ್ ಸಿಬ್ಬಂದಿ ಒಳಗೊಂಡ ತನಿಖಾ ಸಂಸ್ಥೆಯು ಜಮ್ಮುವಿನ ಪೂಂಚ್, ರಜೌರಿ ಮತ್ತು ಕಾಶ್ಮೀರದ ಪುಲ್ವಾಮಾ, ಶೋಪಿಯಾನ್, ಶ್ರೀನಗರ ಹಾಗೂ ಬಂಡಿಪೊರ ಜಿಲ್ಲೆಗಳಲ್ಲಿ ಪ್ರತ್ಯೇಕ ಶೋಧ ಕಾರ್ಯಾಚರಣೆ ನಡೆಸಿತು ಎಂದು ವರದಿಯಾಗಿದೆ.
ಧರ್ಮ ಬೋಧಕ ದಾರುಲ್ ಉಲ್–ಉಲೂಮ್ ರಹೀಮಿಯ್ಯ, ಮೌಲಾನಾ ರೆಹಮ್ತುಲ್ಲಾ ಕಾಸ್ಮಿ ಮತ್ತು ಶ್ರೀನಗರ ಎನ್ಐಟಿ ಪ್ರಾಧ್ಯಪಕ ಸಮಮ್ ಅಹ್ಮದ್ ಲೋನ್ ಅವರ ನಿವಾಸದ ಮೇಲೂ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಉಗ್ರರಿಗೆ ಆರ್ಥಿಕ ನೆರವು ನೀಡುತ್ತಿರುವ ಆರೋಪ ಸಂಬಂಧ 2017ರಿಂದ ಎನ್ಐಎ ಕಾಶ್ಮೀರದ ವಿವಿಧೆಡೆ ನಿರಂತರವಾಗಿ ಶೋಧ ಕಾರ್ಯಾಚರಣೆ ಕೈಗೊಳ್ಳುತ್ತಿದೆ.