ಮುಂಬೈ: ರೈಲ್ವೆ ಸಿಗ್ನಲ್ ದುರಸ್ತಿ ಮಾಡುತ್ತಿದ್ದ ಕಾರ್ಮಿಕರಿಗೆ ಮತ್ತೊಂದು ಹಳಿಯಲ್ಲಿ ಸಾಗುತ್ತಿದ್ದ ರೈಲು ಡಿಕ್ಕಿಯಾದ ಪರಿಣಾಮ ಮೂವರು ಸ್ಥಳದಲ್ಳೇ ಮೃತಪಟ್ಟ ಘಟನೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಸಾಯ್ ರಸ್ತೆ ಮತ್ತು ನೈಗಾಂವ್ ನಿಲ್ದಾಣಗಳ ನಡುವೆ ಸೋಮವಾರ ತಡರಾತ್ರಿ ನಡೆದಿದೆ.
ಮೃತರನ್ನು ಮುಖ್ಯ ಸಿಗ್ನಲಿಂಗ್ ಇನ್ಸ್ಪೆಕ್ಟರ್ ವಾಸು ಮಿತ್ರ, ಎಲೆಕ್ಟ್ರಿಕಲ್ ಸಿಗ್ನಲಿಂಗ್ ನಿರ್ವಾಹಕ ಅಧಿಕಾರಿ ಸೋಮನಾಥ ಉತ್ತಮ್ ಲಂಬುಟ್ರೆ, ಸಹಾಯಕ ಸಚಿನ್ ವಾಂಖೆಡೆ ಎಂದು ಗುರುತಿಸಲಾಗಿದೆ.
ಸೋಮವಾರ ತಡರಾತ್ರಿ ಈ ಘಟನೆ ನಡೆದಿದೆ. ಘಟನಾ ಸಂಬಂಧ ತನಿಖೆ ನಡೆಸಲು ಪಶ್ಚಿಮ ರೈಲ್ವೆ (ಡಬ್ಲ್ಯುಆರ್) ಆದೇಶಿಸಿದೆ.
ವಸಾಯ್ ರಸ್ತೆ ಮತ್ತು ನೈಗಾಂವ್ ನಡುವಿನ ರೈಲು ಮಾರ್ಗದಲ್ಲಿ ಸಿಗ್ನಲ್ ಸಮಸ್ಯೆ ಕಾಣಿಸಿಕೊಂಡಿತ್ತು. ಕೂಡಲೇ ವಾಸು ಮಿತ್ರ, ಸೋಮನಾಥ, ಸಚಿನ್ ಸ್ಥಳಕ್ಕೆ ಧಾವಿಸಿ ನಿರ್ವಹಣೆ ಕಾರ್ಯದಲ್ಲಿ ತೊಡಗಿದ್ದರು. ಆದರೆ, ಇದೇ ಮಾರ್ಗದಲ್ಲಿ ಬಂದ ಚರ್ಚ್ಗೇಟ್ - ವಿರಾರ್ ರೈಲು ಡಿಕ್ಕಿ ಹೊಡೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೃತರ ಕುಟುಂಬಸ್ಥರಿಗೆ ತಕ್ಷಣಕ್ಕೆ ತಲಾ ₹55 ಸಾವಿರ ಪರಿಹಾರ ನೀಡಲಾಗಿದೆ. ಮುಂದಿನ 15 ದಿನಗಳಲ್ಲಿ ಇತರೆ ಭತ್ಯೆಗಳು ಸೇರಿದಂತೆ ತಲಾ ₹40 ಲಕ್ಷ ಪರಿಹಾರ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.