ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯದ ದಿನಾಂಕ ಬದಲಾಗುವ ಸಾಧ್ಯತೆ ಇಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ದೆಹಲಿ ಸೇವಾ ವಿಷಯ: ಸುಗ್ರೀವಾಜ್ಞೆ ಬದಲಿಸುವ ಮಸೂದೆ ಮುಂದಿನ ವಾರ ಮಂಡನೆ. ಶಾಸಕಾಂಗ ಸಭೆ ಕರೆಯಲು ಕೋರಿ ಪತ್ರ ಬರೆದ ಶಾಸಕರು ಸಿಎಂ ಸಿದ್ದರಾಮಯ್ಯ ಬಳಿ ಕ್ಷಮೆ ಕೇಳಿದ್ದಾರೆ. ಇವೇ ಮುಂತಾದ ಈ ದಿನದ ಪ್ರಮುಖ 10 ಸುದ್ದಿಗಳ ಸಂಕ್ಷಿಪ್ತ ವಿವರ ಇಲ್ಲಿದೆ.
‘ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಪತ್ರ ಬರೆದ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಕ್ಷಮೆ ಕೇಳಿದ್ದಾರೆ. ಗೊತ್ತಾಗದೆ ಪತ್ರ ಬರೆದು ತಪ್ಪು ಮಾಡಿರುವುದಾಗಿ ಹೇಳಿದ್ದಾರೆ’ ಎಂದು ಗೃಹ ಸಚಿವ ಜಿ.ಪರಮೇಶ್ವರ ಸ್ಪಷ್ಟಪಡಿಸಿದರು. ‘ಪತ್ರ ಬರೆಯುವುದು ಅಷ್ಟೊಂದು ಸೂಕ್ತವಲ್ಲ. ಮೌಖಿಕವಾಗಿ ಹೇಳಿದ್ದರೆ ಶಾಸಕಾಂಗ ಪಕ್ಷದ ಸಭೆ ಕರೆಯುತ್ತಿದ್ದೆ. ಪತ್ರ ಬರೆದು ಸಹಿ ಅಭಿಯಾನ ನಡೆಸುವ ಸಂಪ್ರದಾಯ ಬೇಡವೆಂದು ಸಿದ್ದರಾಮಯ್ಯ ಅವರು ಶಾಸಕರಿಗೆ ತಾಕೀತು ಮಾಡಿದ್ದಾರೆ’ ಎಂದು ಅವರು ಹೇಳಿದರು.
ಓದಿ..
ಪತ್ರ ಬರೆದ ಶಾಸಕರು ಸಿಎಂ ಸಿದ್ದರಾಮಯ್ಯ ಬಳಿ ಕ್ಷಮೆ ಕೇಳಿದ್ದಾರೆ: ಪರಮೇಶ್ವರ್
ಉಡುಪಿಯ ನೇತ್ರಜ್ಯೋತಿ ಪ್ಯಾರಾ ಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಮಾಡಿದ ಪ್ರಕರಣದಲ್ಲಿ ಆರೋಪಿತ ಮೂವರು ವಿದ್ಯಾರ್ಥಿನಿಯರಿಗೆ ಜಿಲ್ಲಾ ನ್ಯಾಯಾಲಯ ಶುಕ್ರವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಬೆಳಿಗ್ಗೆ ನ್ಯಾಯಾಲಯಕ್ಕೆ ಹಾಜರಾಗಿ ಶರಣಾದ ವಿದ್ಯಾರ್ಥಿನಿಯರು ವಕೀಲರ ಮೂಲಕ ಜಾಮೀನು ಕೋರಿ ಅರ್ಜಿ ಸಲ್ಲಿಸಿದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು ತನಿಖಾಧಿಕಾರಿಯ ತನಿಖೆಗೆ ಸಹಕರಿಸಬೇಕು, ವಿಚಾರಣೆಗೆ ತಪ್ಪದೆ ಹಾಜರಾಗಬೇಕು ಹಾಗೂ ತಲಾ ₹ 20 ಸಾವಿರ ಮೌಲ್ಯದ ಬಾಂಡ್ ಸಲ್ಲಿಸಬೇಕು ಎಂಬ ಷರತ್ತಿನೊಂದಿಗೆ ಜಾಮೀನು ಮಂಜೂರು ಮಾಡಿದರು.
ಓದಿ..
ಶೌಚಾಲಯದಲ್ಲಿ ವಿಡಿಯೊ ಚಿತ್ರೀಕರಣ ಪ್ರಕರಣ: ಮೂವರು ವಿದ್ಯಾರ್ಥಿನಿಯರಿಗೆ ಜಾಮೀನು
ಭೀಮಾ ಕೋರೆಗಾಂವ್ ಪ್ರಕರಣ ಸಂಬಂಧ ಕಳೆದ 5 ವರ್ಷಗಳಿಂದ ಬಂಧನದಲ್ಲಿದ್ದ ಇಬ್ಬರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿದೆ. ವರ್ನಾನ್ ಗೊನ್ಸಲ್ವೆಸ್ ಹಾಗೂ ಅರುಣ್ ಫೆರಾರೆ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ. ನ್ಯಾಯಮೂರ್ತಿಗಳಾದ ಅನುರಾಧ ಬೋಸ್ ಹಾಗೂ ಸುಧಾಂಶು ಧುಲಿಯಾ ಅವರಿದ್ದ ಪೀಠ ಷರತ್ತುಬದ್ಧ ಜಾಮೀನು ನೀಡಿ ಆದೇಶಿಸಿದೆ.
ಓದಿ..
ಭೀಮಾ ಕೋರೆಗಾಂವ್ ಪ್ರಕರಣ: ಗೊನ್ಸಲ್ವೆಸ್, ಫೆರಾರೆಗೆ ಸುಪ್ರೀಂ ಕೋರ್ಟ್ ಜಾಮೀನು
ದೇಶದಲ್ಲಿ 2014-15ರಲ್ಲಿ 1,000 ಗಂಡು ಮಕ್ಕಳಿಗೆ 918 ರಷ್ಟಿದ್ದ ಹೆಣ್ಣುಮಕ್ಕಳ ಜನನದ ಲಿಂಗಾನುಪಾತ 2022-23ರ ಅವಧಿಯಲಿ 15 ಅಂಶಗಳಷ್ಟು ಏರಿಕೆ ಕಂಡು 933ಕ್ಕೆ ಮುಟ್ಟಿದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಶುಕ್ರವಾರ ಲೋಕಸಭೆಗೆ ತಿಳಿಸಿದರು. ಸಂಸತ್ತಿನ ಕೆಳಮನೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು, 'ಬೇಟಿ ಬಚಾ ಬೇಟಿ ಪಢಾವೊ' ಯೋಜನೆಯು ಹೆಣ್ಣು ಮಗುವಿನ ಹಕ್ಕುಗಳನ್ನು ಅಂಗೀಕರಿಸಲು ಸಾರ್ವಜನಿಕರಲ್ಲಿ ಸಾಮೂಹಿಕ ಪ್ರಜ್ಞೆಯನ್ನು ಹುಟ್ಟುಹಾಕಿದೆ ಎಂದು ಹೇಳಿದ್ದಾರೆ.
ಓದಿ..
ಜನನದ ಲಿಂಗಾನುಪಾತ: 2022-23ರಲ್ಲಿ 15 ಅಂಶಗಳಷ್ಟು ಸುಧಾರಣೆ– ಕೇಂದ್ರ ಸರ್ಕಾರ
ಲೋಕಸಭೆಯಲ್ಲಿ ಸಂಖ್ಯಾಬಲವನ್ನು ಹೊಂದಿರುವ ನಂಬಿಕೆ ನಿಮಗೆ ಇದ್ದರೆ ಸದನದಲ್ಲಿ ಸರ್ಕಾರದ ಮಸೂದೆಗಳನ್ನು ತಡೆಹಿಡಿಯಿರಿ ಎಂದು ಪ್ರತಿಪಕ್ಷಗಳಿಗೆ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಸವಾಲು ಹಾಕಿದ್ದಾರೆ.ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯವು ಬಾಕಿಇರುವ ಸಮಯದಲ್ಲಿ ಸರ್ಕಾರವು ಶಾಸಕಾಂಗ ವ್ಯವಹಾರವನ್ನು ಕೈಗೆತ್ತಿಕೊಂಡಿರುವುದನ್ನು ಪ್ರತಿಪಕ್ಷಗಳು ಆಕ್ಷೇಪಿಸಿದ ನಂತರ ಜೋಶಿ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಓದಿ..
ಸಂಖ್ಯಾಬಲವಿದ್ದರೆ ಸರ್ಕಾರದ ಮಸೂದೆಗಳನ್ನು ತಡೆಯಿರಿ: ವಿಪಕ್ಷಗಳಿಗೆ ಜೋಶಿ ಸವಾಲು
ವೈಮಾನಿಕ ಕಾರ್ಯಾಚರಣೆಗಳು, ತರಬೇತಿ ಮತ್ತು ಎಂಜಿನಿಯರಿಂಗ್ ಕಾರ್ಯವಿಧಾನಗಳಿಗೆ ಸಂಬಂಧಿಸಿದ ದಾಖಲಾತಿಗಳ ಕೆಲವು ವ್ಯವಸ್ಥಿತ ನ್ಯೂನತೆಗಳಿಗೆ ಸಂಬಂಧಿಸಿದಂತೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು( ಡಿಜಿಸಿಎ) ಇಂಡಿಗೊ ಏರ್ಲೈನ್ಸ್ಗೆ ₹30 ಲಕ್ಷ ದಂಡ ವಿಧಿಸಿದೆ. ವಿಶೇಷ ಲೆಕ್ಕಪರಿಶೋಧನೆಯ ಸಮಯದಲ್ಲಿ, ಇಂಡಿಗೊದ ಕಾರ್ಯಾಚರಣೆಗಳು/ತರಬೇತಿ ಕಾರ್ಯವಿಧಾನಗಳು ಮತ್ತು ಎಂಜಿನಿಯರಿಂಗ್ ಕಾರ್ಯವಿಧಾನಗಳಿಗೆ ಸಂಬಂಧಿಸಿದ ದಾಖಲಾತಿಗಳಲ್ಲಿ ಕೆಲವು ವ್ಯವಸ್ಥಿತ ನ್ಯೂನತೆಗಳನ್ನು ಗಮನಿಸಲಾಗಿದೆ ಎಂದು ಅದು ಹೇಳಿದೆ.
ಓದಿ..
ದಾಖಲಾತಿಗಳ ನ್ಯೂನತೆ: ಇಂಡಿಗೊ ಏರ್ಲೈನ್ಸ್ಗೆ ₹30 ಲಕ್ಷ ದಂಡ ವಿಧಿಸಿದ ಡಿಜಿಸಿಎ
‘ದೆಹಲಿ– ಮುಂಬೈ ವಿಮಾನದಲ್ಲಿ ವೈದ್ಯೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಕಾರಣಕ್ಕಾಗಿ ಪ್ರಾಧ್ಯಾಪಕರೊಬ್ಬರನ್ನು ಬಂಧಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ. ‘ಈ ಘಟನೆ ಬುಧವಾರ ನಡೆದಿದೆ. ವೈದ್ಯೆ ಹಾಗೂ ಪ್ರಾಧ್ಯಾಪಕ ಅಕ್ಕಪಕ್ಕದ ಆಸನಗಳಲ್ಲಿ ಕುಳಿತಿದ್ದರು. ವಿಮಾನವು ಮುಂಬೈನಲ್ಲಿ ಇಳಿಯುವುದಕ್ಕೆ ಸ್ವಲ್ಪ ಸಮಯದ ಮುನ್ನ ಆರೋಪಿಯು ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ವೈದ್ಯೆ ದೂರು ನೀಡಿದ್ದಾರೆ’ ಎಂದು ಅವರು ಹೇಳಿದರು.
ಓದಿ..
ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ಕೇಂದ್ರ ಸರ್ಕಾರದ ನಡುವೆ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿರುವ ದೆಹಲಿಯ ಸೇವಾ ವಿಷಯಗಳ ಆಡಳಿತಾತ್ಮಕ ನಿಯಂತ್ರಣ ಸಂಬಂಧ ಹೊರಡಿಸಿರುವ ಸುಗ್ರೀವಾಜ್ಞೆ ಬದಲಾಯಿಸುವ ಮಸೂದೆಯನ್ನು ಮುಂದಿನ ವಾರ ಲೋಕಸಭೆಯಲ್ಲಿ ಮಂಡಿಸಲಾಗುವುದು ಎಂದು ಕಾನೂನು ಸಚಿವ ಅರ್ಜುನರಾಮ್ ಮೆಘವಾಲ್ ಶುಕ್ರವಾರ ತಿಳಿಸಿದ್ದಾರೆ.
ಓದಿ..
ದೆಹಲಿ ಸೇವಾ ವಿಷಯ: ಸುಗ್ರೀವಾಜ್ಞೆ ಬದಲಿಸುವ ಮಸೂದೆ ಮುಂದಿನ ವಾರ ಮಂಡನೆ
ನವದೆಹಲಿ: ಕಳೆದ 30 ವರ್ಷಗಳಲ್ಲಿ ದೇಶದ ವಿವಿಧ ಹೈಕೋರ್ಟ್ಗಳಲ್ಲಿ 71 ಸಾವಿರಕ್ಕೂ ಅಧಿಕ ಪ್ರಕರಣಗಳು ಇತ್ಯರ್ಥವಾಗದೆ ಬಾಕಿ ಉಳಿದಿದೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ಲೋಕಸಭೆಗೆ ತಿಳಿಸಿದೆ. ಅಲ್ಲದೇ ಸುಮಾರು 1.01 ಲಕ್ಷ ಪ್ರಕರಣಗಳು 30ಕ್ಕೂ ಅಧಿಕ ವರ್ಷಗಳಿಂದ ಕೆಳ ನ್ಯಾಯಾಲಯಗಳಲ್ಲಿ ಹಾಗೇ ಇವೆ ಎಂದು ಸರ್ಕಾರ ಹೇಳಿದೆ.
ಓದಿ..
30 ವರ್ಷಗಳಿಂದ ಹೈಕೋರ್ಟ್ಗಳಲ್ಲಿ 71,000ಕ್ಕೂ ಅಧಿಕ ಪ್ರಕರಣಗಳು ಬಾಕಿ: ಕೇಂದ್ರ
ಅಹಮದಾಬಾದಿನಲ್ಲಿ ಆಯೋಜಿಸಲಾಗಿರುವ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯದ ದಿನಾಂಕ ಬದಲಾಗುವ ಸಾಧ್ಯತೆ ಇಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯ ಅಕ್ಟೋಬರ್ 15ರಂದೇ ನಡೆಯಲಿದೆ ಈ ಬಗ್ಗೆ ಎರಡು–ಮೂರು ದಿನಗಳಲ್ಲಿ ಖಚಿತ ಮಾಹಿತಿ ನೀಡಲಾಗುವುದು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಓದಿ..
ವಿಶ್ವಕಪ್: ಭಾರತ–ಪಾಕ್ ಪಂದ್ಯದ ದಿನಾಂಕ ಬದಲಾಗುವ ಸಾಧ್ಯತೆ ಇಲ್ಲ– ಜಯ್ ಶಾ