ಉತ್ತರಕಾಶಿ: ಸಿಲ್ಕ್ಯಾರಾ–ಬಡಕೋಟ್ ಸುರಂಗ ನಿರ್ಮಾಣ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಈಗ ಗೊಂದಲಕ್ಕೆ ಬಿದ್ದಿದ್ದಾರೆ. ವಾಪಸ್ ತಮ್ಮ ಊರುಗಳಿಗೆ ತೆರಳಬೇಕೋ, ಕಾಮಗಾರಿ ಸ್ಥಳದಲ್ಲಿಯೇ ಉಳಿಯಬೇಕೋ ಎಂಬುದು ಅವರಲ್ಲಿನ ಗೊಂದಲ.
ವಾಪಸ್ ಬರುವಂತೆ ಅವರ ಕುಟುಂಬಸ್ಥರು ಒತ್ತಾಯಿಸುತ್ತಿದ್ದಾರೆ. ‘ವಾಪಸ್ ಮನೆಗೆ ಹೋಗಲು ನಾನು ರಜಾ ಅರ್ಜಿಯನ್ನು ಭರ್ತಿ ಮಾಡಿ ಇಟ್ಟಿದ್ದೇನೆ. ನಿರ್ಮಾಣ ಕಾಮಗಾರಿಗಳು ಇಲ್ಲಿ ಮತ್ತೆ ಯಾವಾಗ ಶುರುವಾಗುತ್ತವೆ ಎಂಬುದು ನಮಗೆ ಗೊತ್ತಿಲ್ಲ’ ಎಂದು ಮೆಷಿನ್ ಆಪರೇಟರ್ ಕೆಲಸ ಮಾಡುತ್ತಿರುವ ಬಿಹಾರದ ಕಾರ್ಮಿಕರೊಬ್ಬರು ತಿಳಿಸಿದರು.
ಸುರಂಗ ಕೊರೆಯುವ ಕೆಲಸವನ್ನು ಬಿಟ್ಟುಬಿಡುವಂತೆ ತಾಯಿ ಹೇಳುತ್ತಿದ್ದಾರೆ ಎಂದು ಇನ್ನೊಬ್ಬರು ಹೇಳಿದರು. ‘ನಾವು ಇಂತಹ ಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತೇವೆ... ಇದು ಅಪಾಯಕಾರಿ’ ಎಂದು ಅವರು ಹೇಳಿದರು.
ಸುರಂಗದ ಸುರಕ್ಷತೆಯ ಪರಿಶೀಲನೆ ನಡೆದ ನಂತರವೇ ನಿರ್ಮಾಣ ಕಾಮಗಾರಿಗಳನ್ನು ಮತ್ತೆ ಆರಂಭಿಸಬಹುದು ಎಂದು ಸರ್ಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಒಳಗೆ ಸಿಲುಕಿದ್ದ ಕಾರ್ಮಿಕರನ್ನು ರಕ್ಷಿಸಲು ಸುರಂಗದ ಮೇಲ್ಭಾಗದಿಂದ 45 ಮೀಟರ್ವರೆಗೆ ಲಂಬವಾಗಿ ಕೊರೆಯಲಾಗಿತ್ತು ಮತ್ತು ತ್ಯಾಜ್ಯಗಳು ಇನ್ನೂ ಸುರಂಗದಲ್ಲಿಯೇ ಇವೆ ಎಂದು ಅವರು ಹೇಳಿದ್ದಾರೆ.
‘ನಾವು ಇಲ್ಲಿ ಇರಬೇಕೋ ಅಥವಾ ಮನೆಗೆ ಹೋಗಬೇಕೋ ಎಂಬುದು ಗೊತ್ತಾಗುತ್ತಿಲ್ಲ’ ಎಂದು ಒಡಿಶಾದ ಕಾರ್ಮಿಕರೊಬ್ಬರು ಹೇಳಿದರು. ಇವರು ಈ ಸುರಂಗ ನಿರ್ಮಾಣ ಕಾಮಗಾರಿಯಲ್ಲಿ ಕಳೆದ ಎರಡು ವರ್ಷಗಳಿಂದ ತೊಡಗಿಸಿಕೊಂಡಿದ್ದಾರೆ.
‘ನಮ್ಮ ಗುತ್ತಿಗೆದಾರ ನಮಗೆ ಎರಡು ದಿನ ವಿಶ್ರಾಂತಿ ನೀಡಿದ್ದಾರೆ. ಆದರೆ ನಾವು ನಮ್ಮ ರಜೆಯನ್ನು ವಿಸ್ತರಿಸುವ ಆಲೋಚನೆ ಹೊಂದಿದ್ದೇವೆ’ ಎಂದು ಉತ್ತರ ಪ್ರದೇಶದ ಇನ್ನೊಬ್ಬರು ಕಾರ್ಮಿಕ ತಿಳಿಸಿದರು.