ತಾಮ್ಲುಕ್ (ಪಶ್ಚಿಮ ಬಂಗಾಳ): ಟಿಎಂಸಿಯು ರಾಜ್ಯದಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿದರೂ, ರಾಷ್ಟ್ರಮಟ್ಟದಲ್ಲಿ ‘ಇಂಡಿಯಾ’ ಒಕ್ಕೂಟದ ಜತೆಗಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಟಿಎಂಸಿಯು ‘ಇಂಡಿಯಾ’ ಒಕ್ಕೂಟಕ್ಕೆ ಬಾಹ್ಯ ಬೆಂಬಲ ನೀಡಲಿದೆ ಎಂದು ಹೇಳಿಕೆ ನೀಡಿದ್ದ ಮರುದಿನ ಅವರು ಈ ಸ್ಪಷ್ಟನೆ ಕೊಟ್ಟಿದ್ದಾರೆ.
ತಾಮ್ಲುಕ್ನಲ್ಲಿ ಗುರುವಾರ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿ, ‘ನಾನು ಕಳೆದ ದಿನ ನೀಡಿದ್ದ ಹೇಳಿಕೆಯನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ‘ಇಂಡಿಯಾ’ ಒಕ್ಕೂಟವು ನನ್ನ ಚಿಂತನೆಯ ಫಲ ಆಗಿದೆ. ರಾಷ್ಟ್ರಮಟ್ಟದಲ್ಲಿ ನಾವು ಜತೆಯಾಗಿದ್ದು, ಮುಂದೆಯೂ ಒಟ್ಟಾಗಿರುತ್ತೇವೆ’ ಎಂದು ತಿಳಿಸಿದರು.
ಆದರೆ ಸಿಪಿಎಂ ಮತ್ತು ಕಾಂಗ್ರೆಸ್ನ ಬಂಗಾಳದ ರಾಜ್ಯ ಘಟಕಗಳು ಬಿಜೆಪಿ ಜತೆ ಕೈಜೋಡಿಸಿವೆ ಎಂದು ಆರೋಪಿಸಿದ ಅವರು, ‘ಸಿಪಿಎಂ ಮತ್ತು ಕಾಂಗ್ರೆಸ್ನವರು ಬಂಗಾಳದಲ್ಲಿ ನಮ್ಮ ಜತೆ ಇಲ್ಲ. ಅವರು ಬಿಜೆಪಿ ಜತೆ ಇದ್ದಾರೆ’ ಎಂದರು.
ಮಮತಾ ಅವಕಾಶವಾದಿ: ಅಧೀರ್
‘ರಾಷ್ಟ್ರ ರಾಜಕಾರಣದಲ್ಲಿ ತಮ್ಮ ಪ್ರಸ್ತುತತೆ ಕಾಪಾಡಿಕೊಳ್ಳಲಿಕ್ಕಾಗಿ ಮಮತಾ ಅವರು ಇಂಡಿಯಾ ಒಕ್ಕೂಟವನ್ನು ಬೆಂಬಲಿಸುತ್ತಿದ್ದಾರೆ’ ಎಂದು ಪಶ್ಚಿಮ ಬಂಗಾಳ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಟೀಕಿಸಿದ್ದಾರೆ. ‘ಇಂಡಿಯಾ ಕೂಟವು ಕೇಂದ್ರದಲ್ಲಿ ಸರ್ಕಾರ ರಚಿಸುವತ್ತ ದಿಟ್ಟ ಹೆಜ್ಜೆಯಿಟ್ಟಿದೆ. ಈ ಕಾರಣದಿಂದ ಕುಟಿಲ ಹಾಗೂ ಅವಕಾಶವಾದಿ ನಾಯಕಿ ಮಮತಾ ಅವರು ಇಂಡಿಯಾ ಕೂಟಕ್ಕೆ ಬೆಂಬಲ ನೀಡಲು ನಿರ್ಧರಿಸಿದ್ದಾರೆ’ ಎಂದರು. ‘ಮತದಾರರು ಇಂಡಿಯಾ ಕೂಟವನ್ನು ಬೆಂಬಲಿಸುತ್ತಿದ್ದಾರೆ ಎಂಬುದು ಮಮತಾಗೆ ಮನವರಿಕೆಯಾಗಿದೆ. ರಾಷ್ಟ್ರ ರಾಜಕಾರಣದಲ್ಲಿ ತಾನು ಏಕಾಂಗಿಯಾಗಬಹುದು ಎಂಬ ಭಯ ಅವರನ್ನು ಕಾಡುತ್ತಿದೆ. ರಾಷ್ಟ್ರ ರಾಜಕಾರಣದಲ್ಲಿ ಉಳಿಯಲು ಅವರು ಮಾಡಿರುವ ತಂತ್ರ ಇದು’ ಎಂದು ಆರೋಪಿಸಿದರು.