ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತ್ಯೇಕ ತೆಲಂಗಾಣ ರಾಜ್ಯ ವಿಭಜನೆ ಮಕ್ಕಳಾಟವಲ್ಲ; ಕೇಂದ್ರದ ದೂಷಣೆ ಬೇಡ– ಚಿದಂಬರಂ

Published 16 ನವೆಂಬರ್ 2023, 13:34 IST
Last Updated 16 ನವೆಂಬರ್ 2023, 13:34 IST
ಅಕ್ಷರ ಗಾತ್ರ

ಹೈದರಾಬಾದ್: ‘ಹೊಸ ರಾಜ್ಯ ರಚನೆ ಅಥವಾ ಇರುವ ರಾಜ್ಯದ ವಿಭಜನೆ ಎರಡೂ ಮಕ್ಕಳಾಟವಲ್ಲ. ಜನ ಹೋರಾಟದ ಫಲವಾಗಿ ಅದು ಆಗುತ್ತದೆ. ಆದರೆ ಇದಕ್ಕಾಗಿ ಕೇಂದ್ರದ (ಅಂದಿನ ಯುಪಿಎ ಸರ್ಕಾರ) ಮೇಲೆ ಆರೋಪ ಹೊರಿಸುವುದು ತಪ್ಪು’ ಎಂದು ಕಾಂಗ್ರೆಸ್‌ ಪಿ.ಚಿದಂಬರಂ ಹೇಳಿದ್ದಾರೆ.

ಹಿಂದಿನ ಯುಪಿಎ ಸರ್ಕಾರದ ವಿಳಂಬನೀತಿ ಧೋರಣೆಯಿಂದಾಗಿ ತೆಲಂಗಾಣ ರಾಜ್ಯ ಉದಯ ತಡವಾಯಿತು ಎಂಬ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ ರಾವ್ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಚಿದಂಬರಂ, ‘ತೆಲಂಗಾಣ ರಾಜ್ಯ ಉದಯಕ್ಕೂ ಪೂರ್ವದಲ್ಲಿ ರಾಜ್ಯವ್ಯಾಪಿ ಮುಷ್ಕರಗಳು ನಡೆದವು. ಈ ಸಂದರ್ಭದಲ್ಲಿ ಹಲವರು ಆತ್ಮಹತ್ಯೆ ಮಾಡಿಕೊಂಡಿದ್ದು ದುರದೃಷ್ಟಕರ. ಅದಕ್ಕಾಗಿ ನಾವು ಕ್ಷಮೆ ಕೇಳುತ್ತೇವೆ’ ಎಂದಿದ್ದಾರೆ.

‘ತೆಲಂಗಾಣ ರಾಜ್ಯದ ಉದಯ ಜನಾಂದೋಲನದಿಂದಲೇ ಆಗಿದೆ. ಆದರೆ ಬಿಆರ್‌ಎಸ್‌ ನೇತೃತ್ವದ ಕೆ.ಚಂದ್ರಶೇಖರ ರಾವ್ ಅವರ ಆಡಳಿತದಲ್ಲಿ ರಾಜ್ಯದಲ್ಲಿ 4 ಸಾವಿರ ಆತ್ಮಹತ್ಯೆ ಪ್ರಕರಣಗಳು ನಡೆದಿವೆ. ಇದಕ್ಕೆ ಯಾರು ಹೊಣೆ’ ಎಂದು ಚಿದಂಬರಂ ಪ್ರಶ್ನಿಸಿದ್ದಾರೆ.

‘ತೆಲಂಗಾಣ ರಾಜ್ಯ ರಚನೆಗೆ ಚಂದ್ರಶೇಖರ್ ಅವರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ರಾಜ್ಯ ರಚನೆಗೆ ಒಪ್ಪಿ ಜನರ ಬೇಡಿಕೆಯನ್ನು ಈಡೇರಿಸಿತು. ಅಂದಿನ ಹೋರಾಟದಲ್ಲಿ ಚಂದ್ರಶೇಖರ ರಾವ್ ಅವರು ಅಪ್ರತಿಮ ನಾಯಕರಾಗಿ ಹೊರಹೊಮ್ಮಿದ್ದರಿಂದಾಗಿ ಅವರು ಇಂದು ಮುಖ್ಯಮಂತ್ರಿಯಾಗಿದ್ದಾರೆ. ಆದರೆ ತೆಲಂಗಾಣವನ್ನು ನಾನು ರಚಿಸಿದೆ. ಇದರಲ್ಲಿ ಜನರ ಪಾತ್ರವೇನೂ ಇಲ್ಲ ಎಂದು ಅವರು ಹೇಳುವಂತಿಲ್ಲ. ಅವರು ಹಾಗೆ ಹೇಳುವುದಿಲ್ಲ ಎಂದು ನಾನು ಭಾವಿಸಿದ್ದೇನೆ. ಒಂದೊಮ್ಮೆ ಹೇಳಿದರೆ ಬರಲಿರುವ ಚುನಾವಣೆಯಲ್ಲಿ ಜನರು ಅದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ’ ಎಂದು ಎಚ್ಚರಿಸಿದ್ದಾರೆ.

‘ತೆಲಂಗಾಣ ರಾಜ್ಯ ರಚನೆ ಘೋಷಣೆಯಾದ 2009ರ ಡಿ. 9ರಂದು ಚಂದ್ರಶೇಖರ ರಾವ್ ಅವರು ಉಪವಾಸ ಅಂತ್ಯಗೊಳಿಸಿದರು. ನ್ಯಾ. ಶ್ರೀಕೃಷ್ಣ ಆಯೋಗವನ್ನು ಕೇಂದ್ರ ಸರ್ಕಾರ ರಚಿಸಿತು. ಸಮಿತಿಯು 6 ಶಿಫಾರಸುಗಳನ್ನು ಮಾಡಿತು. ಅಂತಿಮವಾಗಿ ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರ್ಕಾರವು ಆಂಧ್ರಪ್ರದೇಶವನ್ನು ವಿಭಜಿಸಿ ತೆಲಂಗಾಣ ರಾಜ್ಯವನ್ನು ರಚಿಸಿತು’ ಎಂದು ಚಿದಂಬರಂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT