ಮುಂಬೈ: ಭಾರತೀಯ ನೌಕಾಪಡೆಯಲ್ಲಿ ಅಗ್ನಿವೀರ್ ತರಬೇತಿ ಪಡೆಯುತ್ತಿದ್ದ 20 ವರ್ಷದ ಯುವತಿ ಮುಂಬೈನ ನೌಕಾಪಡೆಯ ಹಾಸ್ಟೆಲ್ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೇರಳ ಮೂಲದ ಯುವತಿ ಮುಂಬೈನ ಭಾರತೀಯ ನೌಕಾಪಡೆಯಲ್ಲಿ ಐಎನ್ಎಸ್ ವಿಭಾಗದಲ್ಲಿ ತರಬೇತಿ ಪಡೆಯುತ್ತಿದ್ದರು. ಸೋಮವಾರ ಬೆಳಿಗ್ಗೆ ಹಾಸ್ಟೆಲ್ ಕೊಠಡಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನಾ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ. ವೈಯಕ್ತಿಕ ಕಾರಣಗಳಿಂದ ಯವತಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಗ್ನಿವೀರ್ :
2022ರ ಜೂನ್ 14ರಂದು ಪರಿಚಯಿಸಲಾದ ಅಗ್ನಿಪಥ್ ಯೋಜನೆಯಡಿ ಸಶಸ್ತ್ರ ಪಡೆಗಳಿಗೆ ನೇಮಕಗೊಂಡ ಸೈನಿಕರು. ಈ ಯೋಜನೆ ಅಡಿಯಲ್ಲಿ ಭಾರತೀಯ ಸೇನೆಯ 3 ವಿಭಾಗಗಳಲ್ಲಿ ಕೆಲಸ ಮಾಡಲು ಇಚ್ಛಿಸುವ ಯುವಕ, ಯುವತಿಯರು ತರಬೇತಿ ಸೇರಿದಂತೆ 4 ವರ್ಷಗಳ ಕಾಲ ಅಗ್ನಿವೀರ್ ಯೋಧರಾಗಿ ಕೆಲಸ ಮಾಡಬಹುದಾಗಿದೆ. 4 ವರ್ಷಗಳಲ್ಲಿ ಮೊದಲಿಗೆ 6 ತಿಂಗಳ ಕಠಿಣ ತರಬೇತಿ ಪಡೆಯಬೇಕು. ನಂತರ ಸಶಸ್ತ್ರ ಪಡೆಗಳಲ್ಲಿ ಮುಂದುವರಿಯಲು ಅರ್ಜಿ ಸಲ್ಲಿಸಬಹುದು.