ನವದೆಹಲಿ: ‘ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಒಂದು ವೇಳೆ ನಿಮಗೆ ಶಿಕ್ಷೆಯಾದರೆ, ನೀವು ಕೋರ್ಟ್ ವಿರುದ್ಧ ದಾವೆ ಹೂಡುತ್ತೀರಾ’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಶನಿವಾರ ಪ್ರಶ್ನಿಸಿದ್ದಾರೆ.
ಅಬಕಾರಿ ನೀತಿ ಪ್ರಕರಣದಲ್ಲಿ ತಮ್ಮ ವಿರುದ್ಧ ಸಿಬಿಐ ಹಾಗೂ ಇ.ಡಿ ಸುಳ್ಳು ಪ್ರಕರಣ ದಾಖಲಿಸಿ, ಅಫಿಡವಿಟ್ಗಳನ್ನು ಸಲ್ಲಿಸಿದ್ದು, ಈ ತನಿಖಾ ಸಂಸ್ಥೆಗಳ ವಿರುದ್ಧ ಕೋರ್ಟ್ ಮೆಟ್ಟಿಲೇರುವುದಾಗಿ ಕೇಜ್ರಿವಾಲ್ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಸಚಿವ ರಿಜಿಜು ಈ ಪ್ರಶ್ನೆ ಕೇಳಿದ್ದಾರೆ.
ಕೇಜ್ರಿವಾಲ್ ಅವರ ಈ ಹೇಳಿಕೆಯನ್ನು ತಮ್ಮ ಟ್ವೀಟ್ನಲ್ಲಿ ಹಂಚಿಕೊಂಡಿರುವ ರಿಜಿಜು, ‘ಭ್ರಷ್ಟಾಚಾರವು ಕೇಜ್ರಿವಾಲ್ ಪಾಲಿಗೆ ಎಂದಿಗೂ ಸಮಸ್ಯೆಯೇ ಆಗಿರಲಿಲ್ಲ’ ಎಂದು ಕುಟುಕಿದ್ದಾರೆ.
‘ಕ್ಷಮಿಸಿ ಅಣ್ಣಾಜಿ (ಹೋರಾಟಗಾರ ಅಣ್ಣಾ ಹಜಾರೆ), ನೀವು ದೇಶದ ಮೇಲೆ ಇಂಥ ದೊಡ್ಡ ಭಾರವನ್ನು ಹೊರಿಸಿದ್ದೀರಿ ಎಂಬುದು ನಿಮಗೇ ಗೊತ್ತಿಲ್ಲ’ ಎಂದೂ ವ್ಯಂಗ್ಯವಾಡಿದ್ದಾರೆ.
‘ನರೇಂದ್ರ ಮೋದಿ, ಅಮಿತ್ ಶಾ ಅವರಂತಹ ಬಿಜೆಪಿಯ ಘಟಾನುಘಟಿಗಳನ್ನು ಸೋಲಿಸಲು ಕೆಲವೊಮ್ಮೆ ಭ್ರಷ್ಟಾಚಾರ ಪರ ವಾಲಬೇಕಾಗುತ್ತದೆ’ ಎಂದು ಸಂದರ್ಶನವೊಂದರಲ್ಲಿ ಕೇಜ್ರಿವಾಲ್ ಹೇಳಿದ್ದರು ಎನ್ನಲಾದ ವಿಡಿಯೊ ತುಣುಕನ್ನು ಸಹ ಅವರು ಹಂಚಿಕೊಂಡಿದ್ದಾರೆ.