ಶ್ರೀನಗರ (ಪಿಟಿಐ): ದೆಹಲಿ ಹೈಕೋರ್ಟ್ ಬಳಿ ಬಾಂಬ್ ಸ್ಫೋಟಿಸಲು ಪಾಕ್ ಆಕ್ರಮಿತ ಕಾಶ್ಮೀರದಿಂದ ಕಳ್ಳಸಾಗಣೆ ಮೂಲಕ ತಂದಿದ್ದ ರಿಮೋಟ್ನ್ನು ಬಳಸಿದ್ದ ಸುಳಿವು ಸಿಕ್ಕಿದೆ.
ಈ ನಮೂನೆಯ ಆರು ರಿಮೋಟ್ಗಳನ್ನು ಉತ್ತರ ಕಾಶ್ಮೀರದ ಉರಿಯ ಮೂಲಕ ಗಡಿ ನಿಯಂತ್ರಣ ರೇಖೆ ವಹಿವಾಟಿನ ವೇಳೆ ತರಲಾಗಿದೆ ಎಂಬುದು ಜಮ್ಮು ಕಾಶ್ಮೀರ ಪೊಲೀಸರು ಮತ್ತು ಕೇಂದ್ರ ತನಿಖಾ ತಂಡಗಳು ನಡೆಸಿದ ತನಿಖೆಯಿಂದ ಪತ್ತೆಯಾಗಿದೆ.
ರಾಜ್ಯ ಪೊಲೀಸರು ಇತ್ತೀಚೆಗೆ ಬಂಧಿಸಿದ ಕೆಲವು ಉಗ್ರರು ಹಾಗೂ ಮೌಲ್ವಿ ಶೌಕತ್ ಸಂಚಿನ ಆರೋಪಿಗಳನ್ನು ತನಿಖೆಗೆ ಒಳಪಡಿಸಿದಾಗಲೂ ಈ ಬಗ್ಗೆ ಬಾಯಿಬಿಟ್ಟಿದ್ದರು. 2011ರ ಸೆಪ್ಟೆಂಬರ್ 7ರಂದು 15 ಜನರನ್ನು ಕೊಂದ ಈ ಬಾಂಬ್ಗಳನ್ನು ಸ್ಫೋಟಿಸಲು ಮೂರು ಬ್ಯಾಟರಿಗಳ ರಿಮೋಟ್ ಬಳಸಲಾಗಿದ್ದ ಅಂಶ ಸರ್ಕೀಟ್ನ ಪರಿಶೀಲನೆಯಿಂದ ತಿಳಿದುಬಂದಿದೆ.
ಉಗ್ರರು, ಈ ಮುಂಚೆ ಬಳಸುತ್ತಿದ್ದ ರಿಮೋಟ್ಗೆ ಬದಲಾಗಿ ಈಗೀಗ ಮೂರು ಬ್ಯಾಟರಿಗಳ ರಿಮೋಟ್ನ್ನೇ ಹೆಚ್ಚು ಉಪಯೋಗಿಸುತ್ತಾರೆ. ಬಾಂಬ್ ಇರಿಸಿದ ಸ್ಥಳದಿಂದ ದೂರದಲ್ಲಿಯೇ ಇದ್ದು, ಅಲ್ಲಿಂದ ಸುಲಭವಾಗಿ ಪರಾರಿಯಾಗಲು ಇದು ಅನುಕೂಲ ಮಾಡಿಕೊಡುತ್ತದೆ.