ಬೆಂಗಳೂರು: ‘ಕನಿಷ್ಠ ಮೂವರು ಸಚಿವರು ಇಲ್ಲದೆ ಕಲಾಪ ನಡೆಸಲು ಆಗದು’ ಎಂಬ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ಮಾತಿಗೆ ವಿರೋಧ ಪಕ್ಷದ ಇತರೆ ಸದಸ್ಯರೂ ಧ್ವನಿಗೂಡಿಸಿದ್ದರಿಂದ ಮಧ್ಯಾಹ್ನದ ನಂತರ ಆರಂಭವಾದ ವಿಧಾನ ಪರಿಷತ್ ಕಲಾಪಗಳನ್ನು ಸಭಾಪತಿ ಬಸವರಾಜ ಹೊರಟ್ಟಿ ಐದು ನಿಮಿಷ ಮುಂದೂಡಿದರು.
ಕಾಂಗ್ರೆಸ್ ವಿರೋಧ ಪಕ್ಷದ ಸ್ಥಾನದಲ್ಲಿದ್ದಾಗ ಇದೇ ವಿಷಯಕ್ಕೆ ಹಲವು ಬಾರಿ ಕಲಾಪಕ್ಕೆ ಅಡ್ಡಿಪಡಿಸಿದ್ದಾರೆ. ಈಗ ಅವರದೇ ಸರ್ಕಾರವಿದೆ. ನಿಯಮ ಪಾಲಿಸಬೇಕಲ್ಲವೇ ಎಂದು ಬಿಜೆಪಿ ಸದಸ್ಯರು ಪ್ರಶ್ನಿಸಿದರು.
‘ಸದನದ ಸದಸ್ಯರೇ ಹೆಚ್ಚಿನ ಸಂಖ್ಯೆಯಲ್ಲಿ ಗೈರು ಹಾಜರಾಗುತ್ತೀರಿ. ಅಧಿಕ ಸಮಯ ಸದನಲ್ಲಿ ಕಳೆಯಬೇಕು. ಮೊಬೈಲ್ಗಳನ್ನು ಸದನದ ಒಳಗೆ ಬಳಸಬೇಡಿ. ಚರ್ಚೆಯಲ್ಲಿ ಮುಕ್ತವಾಗಿ ಭಾಗವಹಿಸಿ’ ಎಂದು ಸಭಾಪತಿ ಎಲ್ಲರಿಗೂ ಕಿವಿಮಾತು ಹೇಳಿದರು.