ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲುಷಿತ ನೀರು ಮತ್ತು ಆಹಾರ ಸೇವನೆ: ವಾರದಲ್ಲಿ 4,748 ಅತಿಸಾರ ಪ್ರಕರಣ

Published 24 ಮೇ 2024, 15:44 IST
Last Updated 24 ಮೇ 2024, 15:44 IST
ಅಕ್ಷರ ಗಾತ್ರ

ಬೆಂಗಳೂರು: ಕಲುಷಿತ ನೀರು ಮತ್ತು ಆಹಾರ ಸೇವನೆಯಿಂದ ರಾಜ್ಯದಲ್ಲಿ ಅತಿಸಾರ (ಡಯೇರಿಯಾ) ಪ್ರಕರಣಗಳು ಏರಿಕೆಯಾಗಿದ್ದು, ಕಳೆದೊಂದು ವಾರದಲ್ಲಿ 4,748 ಪ್ರಕರಣಗಳು ದೃಢಪಟ್ಟಿವೆ.

ಆರೋಗ್ಯ ಇಲಾಖೆಯು ಸೋಂಕು ರೋಗಗಳ ವರದಿಯನ್ನು ಬಿಡುಗಡೆ ಮಾಡಿದ್ದು, ಇದರ ಪ‍್ರಕಾರ ಈ ವರ್ಷ ವರದಿಯಾದ ಒಟ್ಟು ಅತಿಸಾರ ಪ್ರಕರಣಗಳ ಸಂಖ್ಯೆ 65,800ಕ್ಕೆ ಏರಿಕೆಯಾಗಿದೆ. ಕಳೆದೊಂದು ತಿಂಗಳಿಂದ ಪ್ರಕರಣಗಳು ಹೆಚ್ಚಳವಾಗಿವೆ. ಮಾರ್ಚ್ ಅಂತ್ಯಕ್ಕೆ 36,814 ಅತಿಸಾರ ಪ್ರಕರಣಗಳು ವರದಿಯಾಗಿದ್ದವು. ಬಳಿಕ ಬಿಸಿಲು ಮಳೆಯ ವಾತಾವರಣದಿಂದಾಗಿ ಪ್ರಕರಣಗಳು ಏರುಗತಿ ಪಡೆದಿವೆ. 

ನಾಯಿ ಹಾಗೂ ಹಾವು ಕಡಿತ ಪ್ರಕರಣಗಳೂ ಏರಿಕೆ ಕಂಡಿವೆ. ಕಳೆದೊಂದು ವಾರದಲ್ಲಿ 7,722 ಮಂದಿ ನಾಯಿ ಕಡಿತಕ್ಕೆ ಒಳಗಾಗಿದ್ದಾರೆ. ಈವರೆಗೆ ವರದಿಯಾದ ಒಟ್ಟು ಪ್ರಕರಣಗಳ ಸಂಖ್ಯೆ 1.28 ಲಕ್ಷಕ್ಕೆ ತಲುಪಿದೆ. ವಾರದಲ್ಲಿ 354 ಹಾವು ಕಡಿತ ಪ್ರಕರಣ ವರದಿಯಾಗಿದೆ. ಈವರೆಗೆ ವರದಿಯಾದ ಒಟ್ಟು ಹಾವು ಕಡಿತ ಪ್ರಕರಣಗಳು 3,034ಕ್ಕೆ ಏರಿಕೆಯಾಗಿದೆ. 17 ಮಂದಿ ಹಾವು ಕಡಿತದಿಂದ ಮೃತಪಟ್ಟಿದ್ದಾರೆ.

ವಾರದಲ್ಲಿ 144 ಡೆಂಗಿ ಹಾಗೂ 11 ಚಿಕೂನ್‌ಗುನ್ಯ ಪ್ರಕರಣಗಳು ದೃಢಪಟ್ಟಿವೆ. ಈ ಪ್ರಕರಣಗಳ ಒಟ್ಟು ಸಂಖ್ಯೆ ಕ್ರಮವಾಗಿ 3,012 ಹಾಗೂ 620ಕ್ಕೆ ತಲುಪಿದೆ.

ಪ್ರಾಣಿಗಳ ಮೂಲಕ ಹರಡುವ ಬ್ಯಾಕ್ಟೀರಿಯಾ ಸೋಂಕು (ಲೆಪ್ಟೊಸ್ಪಿರೋಸಿಸ್) ವಾರದಲ್ಲಿ 25 ಮಂದಿಗೆ ದೃಢಪಟ್ಟಿದೆ. ಈವರೆಗೆ ಒಟ್ಟು 422 ಮಂದಿ ಸೋಂಕಿತರಾಗಿದ್ದಾರೆ. ಮಂಗನ ಕಾಯಿಲೆಯೂ (ಕೆಎಫ್‌ಡಿ) ವಾರದಲ್ಲಿ ಒಂಬತ್ತು ಮಂದಿಯಲ್ಲಿ ಖಚಿತಪಟ್ಟಿದೆ. ಒಟ್ಟು ಕೆಎಫ್‌ಡಿ ಪ್ರಕರಣಗಳ ಸಂಖ್ಯೆ 339ಕ್ಕೆ ಏರಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT