ಬೆಂಗಳೂರು: ವೈವಾಹಿಕ ಜಾಲತಾಣದ ಮೂಲಕ ಯುವಕರನ್ನು ಪರಿಚಯ ಮಾಡಿಕೊಂಡು ಹನಿಟ್ರ್ಯಾಪ್ಗೆ ಬೀಳಿಸಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಆರೋಪದಡಿ ಸಿ.ಎಸ್. ಕವಿತಾ (38) ಎಂಬುವರನ್ನು ಇಂದಿರಾನಗರ ಪೊಲೀಸರು ಬಂಧಿಸಿದ್ದಾರೆ.
'ದೇವಯ್ಯ ಪಾರ್ಕ್ ನಿವಾಸಿಯಾದ ಕವಿತಾ, ಚಿಕ್ಕಮಗಳೂರಿನ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿ ಆಗಿದ್ದರು. ಸಹೋದ್ಯೋಗಿ ಮೇಲೆ ಹಲ್ಲೆ ಮಾಡಿದ್ದಕ್ಕಾಗಿ ಅವರನ್ನು ಇತ್ತೀಚೆಗೆ ಕೆಲಸದಿಂದ ವಜಾ ಮಾಡಲಾಗಿತ್ತು. ಬ್ಲ್ಯಾಕ್ಮೇಲ್ ಸಂಬಂಧ ಪ್ರೇಮ್ ಎಂಬುವರು ದೂರು ನೀಡಿದ್ದರು. ತನಿಖೆ ಕೈಗೊಂಡು ಕವಿತಾ ಅವರನ್ನು ಬಂಧಿಸಲಾಗಿದೆ' ಎಂದು ಪೊಲೀಸರು ಹೇಳಿದರು.
'ದೂರುದಾರ ಪ್ರೇಮ್, ವಧುವನ್ನು ಹುಡುಕುತ್ತಿದ್ದರು. ಜೀವನ್ ಸಾಥಿ ಡಾಟ್ ಕಾಮ್ ಜಾಲತಾಣದಲ್ಲಿ ಖಾತೆ ತೆರೆದಿದ್ದರು. ಅವರಿಗೆ ರಿಕ್ವೆಸ್ಟ್ ಕಳುಹಿಸಿದ್ದ ಆರೋಪಿ, ಅನ್ಯೋನ್ಯವಾಗಿ ಮಾತನಾಡಿದ್ದರು. ನಂತರ ಪರಸ್ಪರ ಸಲುಗೆಯೂ ಬೆಳೆದಿತ್ತು.'
'ಡಿ. 26ರಂದು ಪ್ರೇಮ್ ಮನೆಗೆ ಹೋಗಿದ್ದ ಆರೋಪಿ, ಸಲುಗೆಯಿಂದ ಖಾಸಗಿ ಕ್ಷಣಗಳನ್ನು ಕಳೆದಿದ್ದರು. ಅದೇ ದೃಶ್ಯಗಳನ್ನು ಲ್ಯಾಪ್ಟಾಪ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದರು' ಎಂದೂ ಪೊಲೀಸರು ವಿವರಿಸಿದರು.
'ಅದೇ ವಿಡಿಯೊ ತೋರಿಸಿ ಬ್ಲ್ಯಾಕ್ಮೇಲ್ ಮಾಡಲಾರಂಭಿಸಿದ್ದ ಆರೋಪಿ, ₹ 5 ಲಕ್ಷ ನೀಡುವಂತೆ ಬೇಡಿಕೆ ಇಟ್ಟಿದ್ದರು. ಅದಕ್ಕೆ ಒಪ್ಪದಿದ್ದರೆ, ಅತ್ಯಾಚಾರದ ದೂರು ನೀಡುವುದಾಗಿ ಬೆದರಿಸಿದ್ದರು. ಈ ಸಂಗತಿ ಪ್ರೇಮ್ ಅವರ ದೂರಿನಲ್ಲಿತ್ತು' ಎಂದೂ ಪೊಲೀಸರು ತಿಳಿಸಿದರು.