ಕನ್ಹೇರಿ (ಕೊಲ್ಹಾಪುರ ಜಿಲ್ಲೆ): ‘ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಕನ್ಹೇರಿಯ ಸಿದ್ದಗಿರಿ ಮಠದ ಆವರಣದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ₹ 3 ಕೋಟಿ ನೆರವು ನೀಡುವುದಾಗಿ’ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.
ಮಠದ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಸಂತ ಸಮಾವೇಶ ಉದ್ಘಾಟಿಸಿ, ಕನ್ನಡ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ‘ಈಗಾಗಲೇ ₹ 1 ಕೋಟಿ ನೀಡಿದ್ದು, ದೀಪಾವಳಿ ಹಬ್ಬಕ್ಕೆ ಮತ್ತೆ ₹ 2 ಕೋಟಿ ನೀಡಲಾ ಗುವುದು’ ಎಂದು ಭರವಸೆ ನೀಡಿದರು.
‘ಕನ್ಹೇರಿ ಮಠವು ದೇಶದ ಆದರ್ಶ ಮಠವಾಗಿದೆ. ಅದೃಶ್ಯ ಕಾಡಸಿದ್ಧೇಶ್ವರ ಶ್ರೀಗಳು ಕರ್ನಾಟಕದಲ್ಲಿಯೂ ದೊಡ್ಡ ಮಠ ತೆರೆಯಬೇಕು. ಅವರ ಆದರ್ಶ ಕೆಲಸಗಳು ನಮಗೂ ಬೇಕು. ಮಠಕ್ಕೆ ಬೇಕಾಗುವ ಜಾಗ ಹಾಗೂ ಅಗತ್ಯ ನೆರವನ್ನು ನೀಡಲಾಗುವುದು’ ಎಂದೂ ವಾಗ್ದಾನ ಮಾಡಿದರು.
ಮತಾಂತರ ತಡೆಯಬೇಕು: ‘ಸ್ವಾಮೀಜಿಗಳು ಮತಾಂತರ ತಡೆಯಲು ಮುಂದಾಗಬೇಕು. ಇಲ್ಲವಾದರೆ ಮತಾಂತರ ರೀತಿಯಲ್ಲೇ ನಮ್ಮನ್ನು ದೇಶಾಂತರ ಮಾಡುತ್ತಾರೆ’ ಎಂದು ಕನ್ಹೇರಿ ಸಿದ್ಧಗಿರಿ ಮಠಾಧೀಶ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಎಚ್ಚರಿಕೆ ನೀಡಿದರು.
ಇದೇ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಕೃಷಿ ವಿಜ್ಞಾನ ಕೇಂದ್ರವನ್ನು ಉದ್ಘಾಟಿಸಿದರು.