ಬಳ್ಳಾರಿ: ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ ಪ್ರಕರಣವನ್ನು ಸರ್ಕಾರ ರಾಷ್ಟ್ರೀಯ ತನಿಖಾ ದಳಕ್ಕೆ ಒಪ್ಪಿಸಬೇಕು ಎಂದು ಮಾಜಿ ಸಚಿವ ಶ್ರೀರಾಮುಲು ಆಗ್ರಹಿಸಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಮುಸ್ಲಿಮರ ತುಷ್ಟೀಕರಣ ಮಾಡುತ್ತಿದೆ. ಭಯೋತ್ಪಾದಕರ ಪರವಾಗಿ ನಿಂತಿದೆ. ವಿಧಾನಸೌಧ ದೇಗುಲವಿದ್ದಂತೆ. ಇಂಥ ದೇಗುಲದಲ್ಲಿ ಪಾಕ್ ಪರ ಘೋಷಣೆ ಕೂಗಿದ್ದು ಕಿಡಿಗೇಡಿ ಕೃತ್ಯ. ವಿಧಾನಸೌಧದಲ್ಲಿ ಘೋಷಣೆ ಕೂಗಿದವರು ಮುಂದೊಂದು ದಿನ ಅದೇ ವಿಧಾನಸೌಧದಲ್ಲಿ ಬಾಂಬ್ ಇಡಲಾರರೇ ಎಂದು ಪ್ರಶ್ನೆ ಮಾಡಿದ್ದಾರೆ.
'ಬಳ್ಳಾರಿಯವರಾದ ನಾಸೀರ್ ಹುಸೇನ್ ಎರಡನೇ ಬಾರಿ ರಾಜ್ಯಸಭಾ ಸದಸ್ಯರಾಗಿದ್ದು ಖುಷಿಯಿದೆ. ಆದರೆ, ಅವರು ಮನಸ್ಸು ಮಾಡಿದ್ದರೆ ಘೋಷಣೆ ಕೂಗಿದವರನ್ನು ಜೈಲಿಗೆ ಕಳುಹಿಸಬಹುದಿತ್ತು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಈ ರೀತಿಯ ಘಟನೆಗಳು ಹೆಚ್ಚುತ್ತಿವೆ' ಎಂದರು.
'ಕಾಂಗ್ರೆಸ್ ಒಂದು ಕಡೆ ಸಂವಿಧಾನ ಜಾಗೃತಿ ಜಾಥಾ ನಡೆಸುತ್ತದೆ. ಆದರೆ ಸಂವಿಧಾನಕ್ಕೆ ಅಗೌರವ ತರುವಂತೆ ನಡೆದುಕೊಳ್ಳುತ್ತಾರೆ. ಅಂಬೇಡ್ಕರ್ ಅವರನ್ನು ಸೋಲಿಸಿದ್ದು ಇದೇ ಕಾಂಗ್ರೆಸ್. ಸ್ಪೀಕರ್ ಹುದ್ದೆ ವಿಚಾರದಲ್ಲಿ ಸಚಿವ ಜಮೀರ್ ಅಹ್ಮದ್ ಅವರು ಅಪಮಾನಕಾರಿಯಾಗಿ ಮಾತನಾಡಿದ್ದರು' ಎಂದು ಆಕ್ರೋಶ ಹೊರಹಾಕಿದರು.