ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿಗಣತಿ ವರದಿ ಸ್ವೀಕಾರ: ‘ಅಹಿಂದ ಸಮುದಾಯಗಳ ಬೇಡಿಕೆಗೆ ಮಣೆ’

ಲಿಂಗಾಯತ, ಒಕ್ಕಲಿಗರ ತೀವ್ರ ವಿರೋಧ
Published 29 ಫೆಬ್ರುವರಿ 2024, 23:30 IST
Last Updated 29 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನಡೆಸಿದ್ದ ಜಾತಿವಾರು ಜನಗಣತಿ (ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ– 2015) ವರದಿಯನ್ನು ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯದ ತೀವ್ರ ವಿರೋಧದ ನಡುವೆಯೂ ರಾಜ್ಯ ಸರ್ಕಾರ ಸ್ವೀಕರಿಸಿದೆ. ಅಲ್ಪಸಂಖ್ಯಾತರು,
ಹಿಂದುಳಿದ ವರ್ಗಗಳು, ದಲಿತ (ಅಹಿಂದ) ಸಮುದಾಯಗಳ ಬೇಡಿಕೆಗೆ ಈ ಮೂಲಕ ಮಣೆ ಹಾಕಿದೆ.

ಕಾಂಗ್ರೆಸ್‌ ನೇತೃತ್ವದ ಸರ್ಕಾರವು ಲೋಕಸಭೆ ಚುನಾವಣೆ ಸನಿಹದಲ್ಲಿರುವಾಗಲೇ ವರದಿಯನ್ನು ಸ್ವೀಕರಿಸಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಈ ಬೆನ್ನಲ್ಲೇ, ಸಿದ್ದರಾಮಯ್ಯ ನೇತೃತ್ವದ ಸಂಪುಟದ ಕೆಲವು ಸಚಿವರು ಹಾಗೂ ಕಾಂಗ್ರೆಸ್ ಶಾಸಕರು ವರದಿ ಬಗ್ಗೆ ತಕರಾರು ತೆಗೆದಿದ್ದಾರೆ. ಸಮೀಕ್ಷೆಗೆ ವಿರೋಧವಿಲ್ಲ; ಸಮೀಕ್ಷೆ ವೈಜ್ಞಾನಿಕವೇ ಎಂದು ಬಿಜೆಪಿ ಪ್ರಶ್ನಿಸಿದೆ. ಈ ಕುರಿತು ಚರ್ಚಿಸಲು ವಿಶೇಷ ಅಧಿವೇಶನ ಕರೆಯುವಂತೆ ಆಗ್ರಹಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರುವಾರ ಭೇಟಿ ಮಾಡಿದ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ, ಸಮೀಕ್ಷೆಯ ದತ್ತಾಂಶಗಳಿರುವ ಸಂಪುಟಗಳು ಮತ್ತು ಜಾತಿಗಳ ಮರು ವರ್ಗೀಕರಣ ಶಿಫಾರಸುಗಳ ವರದಿಯನ್ನು ಹೊಂದಿದ್ದ ಎರಡು ಪೆಟ್ಟಿಗೆಗಳನ್ನು ಹಸ್ತಾಂತರಿಸಿದರು. ವರದಿ ಸಲ್ಲಿಸಿದ ದಿನವೇ (ಫೆ. 29) ಹಾಲಿ ಆಯೋಗದ ಅಧಿಕಾರಾವಧಿಯೂ ಕೊನೆಗೊಂಡಿದೆ. 

ಸಿದ್ದರಾಮಯ್ಯ ಅವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದ (2013–18) ಅವಧಿಯಲ್ಲಿ ಆಯೋಗದ ಅಂದಿನ ಅಧ್ಯಕ್ಷರಾಗಿದ್ದ ಎಚ್‌. ಕಾಂತರಾಜ ನೇತೃತ್ವದಲ್ಲಿ ಈ ಸಮೀಕ್ಷೆಯನ್ನು ನಡೆಸಲಾಗಿತ್ತು. ಸಮೀಕ್ಷೆಗೆ ₹158 ಕೋಟಿ ವೆಚ್ಚವಾಗಿತ್ತು. ಸಿದ್ದರಾಮಯ್ಯ ಅವರ ಅವಧಿಯಲ್ಲಿ ವರದಿ ಸಿದ್ಧಗೊಂಡಿರಲಿಲ್ಲ. ನಂತರ ವರದಿ
ಸಿದ್ಧವಾಗಿದ್ದರೂ, ಕಾಂಗ್ರೆಸ್–ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ, ನಂತರ ಮುಖ್ಯಮಂತ್ರಿಯಾದ ಬಿ.ಎಸ್‌. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಈ ವರದಿಯನ್ನು ಸ್ವೀಕರಿಸಲು ಮುಂದಾಗಿರಲಿಲ್ಲ. 

ಎರಡನೇ ಬಾರಿಗೆ ಮುಖ್ಯಮಂತ್ರಿ ಯಾಗಿ ಚುಕ್ಕಾಣಿ ಹಿಡಿದ ದಿನದಿಂದಲೇ ‘ವರದಿ ಸ್ವೀಕರಿಸುವ ನನ್ನ ನಿರ್ಧಾರ ಅಚಲ’ ಎಂದು ಸಿದ್ದರಾಮಯ್ಯ ಹೇಳಿಕೊಂಡೇ ಬಂದಿದ್ದರು. ಆದರೆ, ಲಿಂಗಾಯತ ಮತ್ತು ಒಕ್ಕಲಿಗ ಸಮು ದಾಯದ ಮಠಾಧೀಶರು, ಸಚಿವರು, ಶಾಸಕರು ವರದಿ ಸ್ವೀಕರಿಸಬಾರದು ಎಂದು ಮುಖ್ಯಮಂತ್ರಿ ಮೇಲೆ ಇನ್ನಿಲ್ಲದ ಒತ್ತಡ ಹೇರಿದ್ದರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಸಚಿವ ಎಂ.ಬಿ. ಪಾಟೀಲ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಪದಾಧಿಕಾರಿಗಳೂ ಆದ ಸಚಿವ ಈಶ್ವರ ಖಂಡ್ರೆ, ಶಾಸಕ ಶಾಮನೂರು ಶಿವಶಂಕರಪ್ಪ ಸೇರಿದಂತೆ ಹಲವರು ಮುಖ್ಯಮಂತ್ರಿಯನ್ನು ಭೇಟಿ ಮಾಡಿ, ವರದಿಗೆ ವಿರೋಧ ವ್ಯಕ್ತಪಡಿಸಿ ಮನವಿ ಪತ್ರವನ್ನೂ ಸಲ್ಲಿಸಿದ್ದರು. 

ವರದಿ ಅಧ್ಯಯನಕ್ಕೆ ಸಂಪುಟ ಉಪ ಸಮಿತಿ?: ವರದಿಯ ಕುರಿತಂತೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ಅಧ್ಯಯನಕ್ಕಾಗಿ ಸಂಪುಟ ಉಪ ಸಮಿತಿ ರಚಿಸುವ ಕುರಿತು ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆಸಿದೆ. ಈ ವರದಿಯ ಆಧಾರದಲ್ಲಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯವಾಗಿ ಪ್ರಬಲವಾಗಿರುವ ಸಮುದಾಯಗಳು ಹಾಗೂ ದುರ್ಬಲ ಸಮುದಾಯಗಳನ್ನು ಗುರುತಿಸುವ ಹೊಣೆಯನ್ನು ಸಂಪುಟ ಉಪ ಸಮಿತಿಗೆ ವಹಿಸುವ ಸಾಧ್ಯತೆ ಇದೆ.

55 ಮಾನದಂಡ ಆಧರಿಸಿ ಸಮೀಕ್ಷೆ:
2011ರ ಜನಗಣತಿ ಪ್ರಕಾರ ರಾಜ್ಯದ ಜನಸಂಖ್ಯೆ 6.30 ಕೋಟಿ. ಈ ಪೈಕಿ, ಸರಿಸುಮಾರು 6 ಕೋಟಿ ಜನಸಂಖ್ಯೆ ಈ ಸಮೀಕ್ಷೆಯ ವ್ಯಾಪ್ತಿಗೆ ಬಂದಿದೆ. ಬೆಂಗಳೂರಿನಲ್ಲಿ ಶೇ 84ರಷ್ಟು ಸಮೀಕ್ಷೆ ನಡೆದಿದೆ. ಉಳಿದ ಜಿಲ್ಲೆಗಳಲ್ಲಿ ಶೇ 98ರಷ್ಟು ಜನರನ್ನು ಸಮೀಕ್ಷೆ ಒಳಗೊಂಡಿದೆ. ಪರಿಶಿಷ್ಟ ಜಾತಿಯಲ್ಲಿ 101, ಪರಿಶಿಷ್ಟ ಪಂಗಡದಲ್ಲಿ 51 ಜಾತಿಗಳಿವೆ. ಸರ್ಕಾರ ಗುರುತಿಸಿರುವ 816 ಇತರ ಹಿಂದುಳಿದ ಜಾತಿಗಳು (ಒಬಿಸಿ) ಸೇರಿ ಒಟ್ಟು 1,351 ಜಾತಿಗಳ ಕುರಿತು 55 ಮಾನದಂಡ ಆಧರಿಸಿ ಈ ಸಮೀಕ್ಷೆ ನಡೆಸಲಾಗಿತ್ತು. ಸಮೀಕ್ಷೆಯ ಬಳಿಕ 464 ಜಾತಿಗಳನ್ನು ಹೊಸತಾಗಿ ಗುರುತಿಸಿ ಪಟ್ಟಿ ಮಾಡಲಾಗಿದೆ. ಉತ್ತರಪ್ರದೇಶ, ಬಿಹಾರ, ಆಂಧ್ರ ಪ್ರದೇಶ ಮತ್ತಿತರ ರಾಜ್ಯಗಳಿಂದ ವಲಸೆ ಬಂದು 60–70 ವರ್ಷಗಳಿಂದ ಇಲ್ಲಿ ನೆಲೆಸಿದವರು ತಮ್ಮ ಜಾತಿ ನಮೂದಿಸಿದ್ದಾರೆ. ಈ ಜಾತಿಗಳು ಕೇವಲ 10 ಜನರಿಂದ 200ರವರೆಗೆ ಜನಸಂಖ್ಯೆ ಹೊಂದಿವೆ ಎಂಬ ಮಾಹಿತಿ ವರದಿಯಲ್ಲಿದೆ.

ಪ್ರತಿ ವಿಧಾನಸಭೆ ಕ್ಷೇತ್ರವಾರು ಜಾತಿ ಲೆಕ್ಕ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ಔದ್ಯಮಿಕ, ನಿವೇಶನರಹಿತರು, ನೀರಾವರಿ ಭೂಮಿ ಹೊಂದಿದವರ ಅಂಕಿಅಂಶ ವರದಿಯಲ್ಲಿದೆ. ಸಮೀಕ್ಷೆ ಯಲ್ಲಿ 10ಕ್ಕಿಂತ ಕಡಿಮೆ ಜನಸಂಖ್ಯೆ ಇರುವ 80 ಜಾತಿಗಳ ಹೆಸರು ದಾಖ ಲಾಗಿವೆ. ಹಲವು ಜಾತಿಗಳು ಇನ್ನೊಂದು ಸಮಾನಾಂತರ ಜಾತಿಗೆ ಹೋಲಿಕೆ ಆಗುತ್ತಿವೆ. 10ಕ್ಕಿಂತ ಹೆಚ್ಚು ಜನಸಂಖ್ಯೆ ಇರುವ 16 ಹೊಸ ಜಾತಿಗಳನ್ನು ಕುಲ ಶಾಸ್ತ್ರಜ್ಞರನ್ನು ಒಳಗೊಂಡ ವಿಷಯ ತಜ್ಞರ ಸಮಿತಿ ಪರಿಶೀಲಿಸಿ ವರದಿ ನೀಡಿದೆ. ಈ ಜಾತಿಗಳ ಪ್ರಸ್ತಾವ ಜನಾಂಗ ಶಾಸ್ತ್ರಜ್ಞರ (ಎಥನೋಗ್ರಾಫರ್) ಪುಸ್ತಕಗಳಲ್ಲೂ ಇರುವುದನ್ನು ಪತ್ತೆ ಮಾಡಲಾಗಿದೆ.

₹158.47 ಕೋಟಿ ವೆಚ್ಚ
ರಾಜ್ಯ ಸರ್ಕಾರ ಈ ಸಮೀಕ್ಷೆಗೆ 2014–2015ನೇ ಸಾಲಿನಿಂದ 2016–17ನೇ ಸಾಲಿನವರೆಗೆ ಒಟ್ಟು ₹206.84 ಕೋಟಿ ನಿಗದಿಪಡಿಸಿದ್ದು, ಅದರಲ್ಲಿ ₹ 192.79 ಕೋಟಿ ಬಿಡುಗಡೆ ಮಾಡಿದೆ. ವರದಿ ಸಿದ್ಧಪಡಿಸಲು ₹158.47 ಕೋಟಿ ವೆಚ್ಚ ಮಾಡಲಾಗಿದೆ. ಜಾತಿ ಜನಗಣತಿಯ ಗಣಕೀಕರಣಕ್ಕೆ ಬಿಇಎಲ್‌ ಸಂಸ್ಥೆ ಜತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅದಕ್ಕೆ, ₹43.09 ಕೋಟಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿತ್ತು. 2015ರಲ್ಲಿ ರಾಜ್ಯದ ಒಟ್ಟು ಜನಸಂಖ್ಯೆಯನ್ನು 6.50 ಕೋಟಿ ಎಂದು ಅಂದಾಜಿಸಿ, ಪ್ರತಿ ವ್ಯಕ್ತಿಯ ಮಾಹಿತಿ ಗಣಕೀಕರಿಸಲು ಮತ್ತು ಪೋರ್ಟಲ್‌ನಲ್ಲಿ ಅಳವಡಿಸಿ ಆಯೋಗಕ್ಕೆ ಬೇಕಾಗುವ ವರದಿ ಒದಗಿಸಲು ತಲಾ ₹6.14ರಂತೆ ಸಂಸ್ಥೆಗೆ ವಹಿಸಲಾಗಿತ್ತು.
‘ವರದಿ ನೋಡಿ ಅಂತಿಮ ನಿರ್ಧಾರ’
‘ಹಿಂದುಳಿದ ವರ್ಗಗಳ ಆಯೋಗವು ಸರ್ಕಾರಕ್ಕೆ ಸಲ್ಲಿಸಿರುವ ಜಾತಿ ಜನಗಣತಿ ವರದಿಯಲ್ಲಿ ಏನಿದೆಯೋ ಗೊತ್ತಿಲ್ಲ. ಅದನ್ನು ಗಮನಿಸಿದ ಮೇಲೆ, ವರದಿಯನ್ನು ಒಪ್ಪಿಕೊಳ್ಳಬೇಕೊ, ಬಿಡಬೇಕೊ ಎನ್ನುವುದನ್ನು ಸರ್ಕಾರ ತೀರ್ಮಾನಿಸಲಿದೆ’ ಎಂದು ಕೈಗಾರಿಕಾ ಸಚಿವ ಎಂ‌.ಬಿ. ಪಾಟೀಲ ಹೇಳಿದರು. ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಜಾತಿ ಗಣತಿ ವರದಿ ಬಗ್ಗೆ ವಿಶೇಷವಾಗಿ ವೀರಶೈವ ಲಿಂಗಾಯತ ಸಮುದಾಯದವರಿಗೆ ಆತಂಕ ಇರುವುದು ನಿಜ. ಏಕೆಂದರೆ, ಇಲ್ಲಿ ಹೆಚ್ಚಿನವರು ಉಪಪಂಗಡಗಳ ಹೆಸರು ಬರೆಸಿದ್ದಾರೆ. ಇದರ ಬದಲು ಎಲ್ಲ ಉಪಪಂಗಡಗಳೂ ‘ವೀರಶೈವ ಲಿಂಗಾಯತ’ ಎಂದಾಗಬೇಕು ಎಂದು ನಾವು ದನಿ ಎತ್ತಿದ್ದು ನಿಜ’ ಎಂದು ಅವರು ವಿವರಿಸಿದರು. ‘ಇದೇ ರೀತಿಯ ಗೊಂದಲ, ಆತಂಕ ಒಕ್ಕಲಿಗರು ಸೇರಿದಂತೆ ಹಲವು ಸಮುದಾಯಗಳಿಗೆ ಇವೆ. ಇವೆಲ್ಲವನ್ನೂ ಸರ್ಕಾರ ಪರಿಗಣನೆಗೆ ತೆಗೆದುಕೊಳ್ಳಲಿದೆ. ಅಂತಿಮ ತೀರ್ಮಾನ ಸರ್ಕಾರದ ವಿವೇಚನೆಗೆ ಬಿಟ್ಟಿದ್ದು’ ಎಂದರು.

‘ನಮ್ಮ ಸಂಬಂಧಿಕರ ಮನೆಗಳಿಗೆ ಬಂದೇ ಇಲ್ಲ’

‘ಜಾತಿ ಜನಗಣತಿ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ. ಆದರೆ, ಸಮೀಕ್ಷೆಯ ಮೂಲಕ ಎಲ್ಲ ಸಮುದಾಯಗಳಿಗೂ ಸಮಾನ ಅವಕಾಶ ಸಿಗಬೇಕು. ಆದರೆ, ಈ ಜನಗಣತಿಯಲ್ಲಿ ಕೆಲವು ದೋಷಗಳಿವೆ. ಕೆಲವರ ಮನೆಗೆ ತೆರಳಿ ಸಮೀಕ್ಷೆ ನಡೆಸಿಲ್ಲ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.

‘ನಮ್ಮ ಸಂಬಂಧಿಕರ ಹಲವು ಮನೆಗಳಿಗೆ ಬಂದೇ ಇಲ್ಲ. ಇಂತಹ ಕೆಲವು ಗೊಂದಲಗಳಿವೆ. ವೀರಶೈವ ಲಿಂಗಾಯತ ಸಮುದಾಯದಲ್ಲಿ ಹಲವು ಉಪಪಂಗಡಗಳಿವೆ‌. ಸಮುದಾಯದಲ್ಲಿ 103 ಉಪ ಪಂಗಡಗಳ ಇರುವುದರಿಂದ ಅಧ್ಯಯನ ಮಾಡಬೇಕು. ವೈಜ್ಞಾನಿಕವಾಗಿ ಸಮೀಕ್ಷೆ ಮಾಡಬೇಕು’ ಎಂದರು. 

ಹಿಂದುಳಿದ ವರ್ಗಗಳ ಆಯೋಗದಿಂದ ನಾನು ವರದಿ ಸ್ವೀಕರಿಸಿದ್ದೇನೆ. ಸಚಿವ ಸಂಪುಟ ಸಭೆಯ ಮುಂದಿಟ್ಟು ವರದಿ ಬಗ್ಗೆ ಚರ್ಚಿಸಲಾಗುವುದು.
ಸಿದ್ದರಾಮಯ್ಯ,ಮುಖ್ಯಮಂತ್ರಿ
ವರದಿ ಸಲ್ಲಿಸುವ ಮೂಲಕ ಬಹಳ ದೊಡ್ಡ ಜವಾಬ್ದಾರಿ ನಿಭಾಯಿಸಿದ್ದೇವೆ. ಮುಂದಿನ ನಿರ್ಧಾರ ಸರ್ಕಾರಕ್ಕೆ ಬಿಟ್ಟಿದ್ದಾಗಿದೆ. ವರದಿ ಸೋರಿಕೆಯಾಗಿಲ್ಲ
.ಕೆ. ಜಯಪ್ರಕಾಶ್‌ ಹೆಗ್ಡೆ, ಅಧ್ಯಕ್ಷ, ಹಿಂದುಳಿದ ವರ್ಗಗಳ ಶಾಶ್ವತ ಆಯೋಗ
ಜಾತಿ ಜನಗಣತಿ ವರದಿಯನ್ನು ನೋಡದೇ ವಿರೋಧ ಮಾಡುವುದು ಸರಿಯಲ್ಲ. ವರದಿ ಬಿಡುಗಡೆಯಾದ ಬಳಿಕ ಈ ಕುರಿತು ಚರ್ಚೆ ಮಾಡುವುದು ಸೂಕ್ತ
ಶಿವರಾಜ ತಂಗಡಗಿ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ
ಸರ್ಕಾರ ರೂಪಿಸಿರುವ ಜಾತಿ ಗಣತಿ ಅವೈಜ್ಞಾನಿಕವಾಗಿದ್ದು, ಇದನ್ನು ವೈಜ್ಞಾನಿಕವಾಗಿ ರೂಪಿಸಲಿ. ಸರಿಯಾದ ಅಂಕಿ ಅಂಶ ಸಂಗ್ರಹಿಸಿ ವರದಿ ನೀಡಲಿ.
ಆರ್. ಅಶೋಕ, ವಿಧಾನಸಭೆ ವಿರೋಧ ಪಕ್ಷದ ನಾಯಕ
‘ನಮ್ಮ ನಿಲುವಿನಲ್ಲಿ ಬದಲಾವಣೆ ಇಲ್ಲ’
‘ಜಾತಿ ಜನಗಣತಿ ವಿರೋಧಿಸಿ ವೀರಶೈವ ಮಹಾಸಭಾದಿಂದ ಮುಖ್ಯಮಂತ್ರಿಗೆ ಈಗಾಗಲೇ ಎರಡು ಬಾರಿ ಮನವಿ ಸಲ್ಲಿಸಲಾಗಿದೆ. ಇತ್ತೀಚೆಗೆ ದಾವಣಗೆರೆಯಲ್ಲಿ ನಡೆದ ವೀರಶೈವ ಮಹಾಸಭಾ ಸಮ್ಮೇಳನದಲ್ಲಿ ಕೂಡ ಜಾತಿ ಜನಗಣತಿ ವಿರೋಧಿಸಿ ನಿರ್ಣಯ ಅಂಗೀಕರಿಸಲಾಗಿದೆ’ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಹಾಗೂ ಕಾಂಗ್ರೆಸ್‌ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು. ‘ಜಾತಿ ಜನಗಣತಿ ವರದಿ ಅವೈಜ್ಞಾನಿಕ ಎಂಬ ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಮನೆ, ಮನೆಗೆ ಭೇಟಿ ನೀಡದೆ ಅವೈಜ್ಞಾನಿಕವಾಗಿ ತಯಾರಿಸಲಾದ ವರದಿಯನ್ನು ಸಮಾಜ ಒಪ್ಪುವುದಿಲ್ಲ. ಈ ನಿಟ್ಟಿನಲ್ಲಿ ಹೋರಾಟ ಮುಂದುವರಿಯಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT