ಮೈಸೂರು: ಸಮಗ್ರ ಶಿಕ್ಷಣ ಅಭಿಯಾನದ ಅಡಿ ನೀಡುವ ಅನುದಾನದಲ್ಲಿಯೂ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ. ಈ ಬಗ್ಗೆ ಪತ್ರ ಬರೆದರೂ ಪ್ರತಿಕ್ರಿಯೆ ಸಿಗುತ್ತಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ದೂರಿದರು.
'ಯೋಜನೆ ಅಡಿ ಪ್ರತಿ ಮಗುವಿಗೆ ಕೇಂದ್ರ ಸರ್ಕಾರವು ತಮಿಳುನಾಡು, ಗುಜರಾತ್ ಮೊದಲಾದ ರಾಜ್ಯಗಳಿಗೆ ವಾರ್ಷಿಕ 5500-6000 ರೂಪಾಯಿ ನೀಡುತ್ತಿದೆ. ಆದರೆ ಕರ್ನಾಟಕಕ್ಕೆ ಮಾತ್ರ ಪ್ರತಿ ಮಗುವಿಗೆ 2400-2800 ರೂಪಾಯಿ ನಿಗದಿ ಪಡಿಸಿದೆ. ಆ ಅನುದಾನವನ್ನೂ ಬಿಡುಗಡೆ ಮಾಡಿಲ್ಲ. ಹಲವು ಬಾರಿ ಅಧಿಕಾರಿಗಳ ತಂಡ ದೆಹಲಿಗೆ ತೆರಳಿ ಈ ಸಂಬಂಧ ಮನವಿ ನೀಡಿದ್ದಾರೆ. ಕೇಂದ್ರ ಶಿಕ್ಷಣ ಸಚಿವರ ಭೇಟಿಗೆ ನಾನೂ ಸಮಯ ಕೇಳಿದ್ದೇನೆ. ಆದರೆ ಈವರೆಗೆ ಅವಕಾಶ ನೀಡಿಲ್ಲ’ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.