ಕಲಬುರ್ಗಿ: ‘ನಾನು ಬಿಜೆಪಿಯಿಂದ ಹಣ ತೆಗೆದುಕೊಂಡಿದ್ದೇನೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡರು ಆರೋಪಿಸಿದ್ದರಿಂದಲೇ ಮಾನಸಿಕವಾಗಿ ನೊಂದ ನನ್ನ ಮಗಳು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅನುತ್ತೀರ್ಣಳಾಗಿದ್ದಾಳೆ’ ಎಂದು ಮಾಜಿ ಶಾಸಕ ಡಾ.ಉಮೇಶ ಜಾಧವ ಆರೋಪಿಸಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್ ಮುಖಂಡರು ನನ್ನ ವಿರುದ್ಧ ಆರೋಪ ಮಾಡುತ್ತಿರುವುದರಿಂದನನ್ನ ಕುಟುಂಬದ ಸದಸ್ಯರು ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ನನ್ನ ಮಗಳಿಗೆ ಸಾಕಷ್ಟು ಅವಮಾನ ಆಗಿದೆ. ಇದಕ್ಕೆಲ್ಲಾ ಕಾಂಗ್ರೆಸ್ ನಾಯಕರ ಆರೋಪವೇ ಕಾರಣ’ ಎಂದು ದೂರಿದರು.
‘ನಾನು ಹಣ ಪಡೆದಿದ್ದು ನಿಜವಾಗಿದ್ದರೆ ಯಾವುದೇ ಸಂಸ್ಥೆಯಿಂದ ಬೇಕಾದರೂ ತನಿಖೆ ನಡೆಸಲಿ’ ಎಂದು ಸವಾಲು ಹಾಕಿದರು.
ಅವರ ಪುತ್ರಿ ಶ್ರದ್ಧಾ ದ್ವಿತೀಯ ಪಿಯು ವಿಜ್ಞಾನ ಓದುತ್ತಿದ್ದರು.
‘ಮಲ್ಲಿಕಾರ್ಜುನ ಖರ್ಗೆ ನಮ್ಮ ದೇಶದ ಶ್ರೀಮಂತ ದಲಿತ ನಾಯಕ. ₹50 ಸಾವಿರ ಕೋಟಿ ಒಡೆಯ. ಅವರ ವಿರುದ್ಧಲೋಕಾಯುಕ್ತ ತನಿಖೆ ನಡೆಯುತ್ತಿದೆ. ಆದರೆ, ಈ ವಿಷಯವನ್ನು ಯಾರಿಗೂ ಗೊತ್ತಾಗದಂತೆ ಮುಚ್ಚಿಡಲಾಗಿದೆ’ ಎಂದು ಆರೋಪಿಸಿದರು.