ಹುಬ್ಬಳ್ಳಿ: ಲೋಕಸಭೆ ಚುನಾವಣೆ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ರಚಿಸಲಾಗಿರುವ ಸಮೀಕ್ಷಾ ತಂಡವು 3-4 ದಿನಗಳೊಳಗೆ ತನ್ನ ವರದಿ ಸಲ್ಲಿಸಲಿದೆ ಎಂದು ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು.
ಹೊಸ ಮುಖ, ಯುವಕರು, ವಾಕ್ ಚಾತುರ್ಯ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದ್ದೇವೆ ಎಂದರು.
ಸಮೀಕ್ಷಾ ತಂಡವು ಈಗಾಗಲೇ ಶೇ 75 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಸಂಚರಿಸಿದೆ. ಅಲ್ಲಿನ ಶಾಸಕರು, ಕಾರ್ಯಕರ್ತರನ್ನು ಭೇಟಿಯಾಗಿ ವರದಿ ಸಿದ್ಧಪಡಿಸಿದ್ದಾರೆ. ನಮ್ಮ ವರಿಷ್ಠರು ಕೆಲವು ಸಲಹೆ ನೀಡಿದ್ದಾರೆ. ಈಗಾಗಲೇ ವರದಿ ಸಲ್ಲಿಕೆಯಾಗ ಬೇಕಾಗಿತ್ತು. ಬೇರೆ ಬೇರೆ ಕಾರಣಗಳಿಂದ ಇದುವರೆಗೆ ಸಲ್ಲಿಸಿಲ್ಲ ಎಂದರು.
ಬರ ಅಧ್ಯಯನ ಮಾಡಲಿ: ಬಿಜೆಪಿಯವರು ಬರ ಅಧ್ಯಯನ ಮಾಡಲಿ, ಕೇಂದ್ರಕ್ಕೆ ವರದಿಯೂ ನೀಡಲಿ ಎಂದು ವ್ಯಂಗ್ಯವಾಡಿದರು.
ಸರ್ಕಾರ ರಚನೆಯಾಗಿ 6 ತಿಂಗಳ ಕಳೆದರೂ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಬಿಜೆಪಿ ಅಸಮರ್ಥವಾಗಿದೆ ಎಂದು ಟೀಕಿಸಿದರು.