ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ ಪರಿಹಾರ ಬಿಡುಗಡೆಗೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ

ಮೋದಿ, ಶಾ ಕರ್ನಾಟಕವನ್ನು ದ್ವೇಷಿಸುತ್ತಾರೆ - ಮುಖ್ಯಮಂತ್ರಿ ಸಿದ್ದರಾಮಯ್ಯ
Published 23 ಏಪ್ರಿಲ್ 2024, 6:58 IST
Last Updated 23 ಏಪ್ರಿಲ್ 2024, 6:58 IST
ಅಕ್ಷರ ಗಾತ್ರ

ಬೆಂಗಳೂರು: 'ಮೋದಿ, ಅಮಿತ್ ಶಾ ಕರ್ನಾಟಕವನ್ನು ದ್ವೇಷಿಸುತ್ತಾರೆ. ರಾಜ್ಯದ ರೈತರನ್ನು ದ್ವೇಷಿಸುತ್ತಾರೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಬರಬೇಕಾಗಿರುವ ಬರ ಪರಿಹಾರದಲ್ಲಿ ತಾರತಮ್ಯ ವನ್ನು ವಿರೋಧಿಸಿ ವಿಧಾನಸೌಧದ ಗಾಂಧಿ ಪ್ರತಿಮೆಯ ಮುಂಭಾಗದಲ್ಲಿ ಮಂಗಳವಾರ ನಡೆದ ಧರಣಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

'ಕೇಂದ್ರಕ್ಕೆ ಮನವಿ ಕೊಟ್ಟು ಏಳು ತಿಂಗಳಾಯಿತು. ಇನ್ನೂ ಪರಿಹಾರ ಬಿಡುಗಡೆ ಮಾಡಿಲ್ಲ. ಅಮಿತ್ ಶಾ, ಮೋದಿ ಯಾವ ಮುಖ ಹೊತ್ತುಕೊಂಡು ಕರ್ನಾಟಕಕ್ಕೆ ಬರುತ್ತಿದ್ದಾರೆ. ಅವರಿಗೆ ಯಾವುದೇ ನೈತಿಕತೆ ಇಲ್ಲ ಕರ್ನಾಟಕದ ಬಗ್ಗೆ ಕೇಂದ್ರ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದೆ. ಇದನ್ನು ಖಂಡಿಸಿ ಇಂದು ಸಾಂಕೇತಿಕ ಪ್ರತಿಭಟನೆ ನಡೆಸಿದ್ದೇವೆ' ಎಂದರು.

'ರಾಜ್ಯ ಸರ್ಕಾರ ರೈತರಿಗೆ ಮೊದಲ ಕಂತಿನಲ್ಲಿ ₹ 2 ಸಾವಿರ ಕೊಟ್ಟಿದ್ದೇವೆ. ಒಟ್ಟು ₹ 659 ಕೋಟಿ ಹಣ ಬಿಡುಗಡೆ ಮಾಡಿದ್ದೇವೆ. ಬರಗಾಲಕ್ಕೆ ನಾವು ಸಮರ್ಪಕವಾಗಿ ಸ್ಪಂದಿಸಿದ್ದೇವೆ. ₹ 18,172 ಕೋಟಿ ಬರ ಪರಿಹಾರ ಹಣವನ್ನು ಎನ್ ಡಿಆರ್ ಎಫ್ ಅಡಿ ಕೇಂದ್ರದಿಂದ ಕೇಳಿದ್ದೇವೆ. ಆದರೆ, ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ. ಮೋದಿ, ಅಮಿತ್ ಶಾ ಯಾವ ಮುಖ ಇಟ್ಟುಕೊಂಡು ರಾಜ್ಯಕ್ಕೆ ಬರುತ್ತಿದ್ದಾರೆ. ರಾಜ್ಯಕ್ಕೆ ಬರಲು ಮೋದಿ, ಶಾ ಅವರಿಗೆ ನೈತಿಕತೆ ಇಲ್ಲ.‌ ಭದ್ರಾ ಮೇಲ್ಡಂಡೆ ಯೋಜನೆಗೆ ಅನುದಾನ ಕೊಟ್ಟಿಲ್ಲ. ರಾಷ್ಟ್ರೀಯ ಯೋಜನೆ ಎಂದೂ ಘೋಷಣೆ ಮಾಡಿಲ್ಲ. 15ನೇ ಹಣಕಾಸು ಆಯೋಗ ಶಿಫಾರಸು ಮಾಡಿದ ವಿಶೇಷ ಹಣವನ್ನೂ ಕೊಟ್ಟಿಲ್ಲ. ಬರ ಪರಿಹಾರಕ್ಕೆ ಇದುವರೆಗೂ ಒಂದೇ ಒಂದು ರೂಪಾಯಿ ಬಿಡುಗಡೆ ಮಾಡಿಲ್ಲ. ಪ್ರವಾಹ ಬಂದಾಗ ಬರಲಿಲ್ಲ, ಭೀಕರ ಬರಗಾಲ ಬಂದಾಗಲೂ ರಾಜ್ಯಕ್ಕೆ‌ ಮೋದಿ ಬರಲಿಲ್ಲ. ಚುನಾವಣೆ ಬಂದಾಗ ಮಾತ್ರ ಬರುತ್ತಿದ್ದಾರೆ. ಹೀಗಾಗಿಯೇ ನಾವು ಗೋ ಬ್ಯಾಕ್ ಮೋದಿ, ಗೋ ಬ್ಯಾಕ್ ಅಮಿತ್ ಶಾ ಎಂದು ಹೇಳುತ್ತಿದ್ದೇವೆ' ಎಂದರು.

'ಸೆಪ್ಟೆಂಬರ್ 22ರಂದು ಬರ ಪರಿಹಾರ ಹಣ ಬಗ್ಗೆ ಮನವಿ ಕೊಟ್ಟಿದ್ದೇವೆ. ಕೇಂದ್ರ ಬರ ಪರಿಹಾರ ತಂಡ ಬಂದು ಪರಿಶೀಲನೆ ಮಾಡಿ ವರದಿ ಕೊಟ್ಟಿದೆ. ಕರ್ನಾಟಕದಲ್ಲಿ 223 ತಾಲ್ಲೂಕುಗಳಲ್ಲಿ ಭೀಕರವಾದ ಬರಗಾಲ ಇದೆ. ಗ್ಯಾರಂಟಿ ಯೋಜನೆಗೆ ಅನುದಾನ ಕೇಳುತ್ತಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು. ನಾವು ಗ್ಯಾರಂಟಿ ಯೋಜನೆಗೆ ದುಡ್ಡು ಕೇಳುತ್ತಿಲ್ಲ' ಎಂದರು.

'ಇನ್ನೂ ಒಂದು ವಾರ ಕಾಯುತ್ತೇವೆ. ವಾರದಲ್ಲಿ ತೀರ್ಮಾನ ಮಾಡುವುದಾಗಿ ಕೇಂ್್ರ ಸರ್ಕಾರ ಕೋರ್ಟ್ ನಲ್ಲಿ ಹೇಳಿದೆ. ಕೇವಲ ಘೋಷಣೆ ಮಾಡಿದರೆ ಆಗುವುದಿಲ್ಲ. ಒಂದು ವೇಳೆ ವಾರದಲ್ಲಿ ಬಿಡುಗಡೆ ಮಾಡದಿದ್ದರೆ ಮತ್ತೆ ಕೋರ್ಟ್ ಗೆ ಹೋಗುತ್ತೇವೆ' ಎಂದರು.

ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, 'ಸುಪ್ರೀಂ ಕೋರ್ಟ್ ನಲ್ಲಿ ಕರ್ನಾಟಕಕ್ಕೆ ಜಯ ಸಿಕ್ಕಿದೆ.‌ ಇಂದು ಅಮಿತ್ ಶಾ ರಾಜ್ಯಕ್ಕೆ ಬರುತ್ತಿದ್ದಾರೆ.‌ ಮೊದಲು ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ಮಾಡಿ.‌ ಇಲ್ಲದೇ ಇದ್ದರೆ ಹೇಗೆ ರಾಜ್ಯದಲ್ಲಿ ಮತ ಯಾಚಿಸುತ್ತೀರಿ. ಕರ್ನಾಟಕದ ಬಗ್ಗೆ ಕರುಣೆ ಇದ್ದರೆ ತಕ್ಷಣ ಹಣ ಬಿಡುಗಡೆ ಮಾಡಬೇಕು' ಎಂದು ಆಗ್ರಹಿಸಿದರು.

'ಕೇಂದ್ರ ಕೊಡುವ ಪ್ರತಿ ಪೈಸೆಯನ್ನು ಇಟ್ಕೊಳ್ಳೋದಿಲ್ಲ.‌ ಎಲ್ಲವನ್ನೂ ರೈತರ ಖಾತೆಗೆ ಹಾಕುತ್ತೇವೆ. ನಾವು ತುಂಬಾ ಅವಮಾನ ಅನುಭವಿಸಿದ್ದೆವು.‌ ಮನವಿ ಕೊಟ್ಟಿಲ್ಲ, ಮನವಿಯೇ ಸರಿ ಇಲ್ಲ ಎಂದೂ ಹೇಳಿದ್ದರು. ಆದರೆ, ಈಗ ಸುಪ್ರೀಂ ಕೋರ್ಟ್ ನಲ್ಲಿ ಕೈ ಜೋಡಿಸಿ ಅವರೇ ಹಣ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ' ಎಂದರು.

ಪ್ರತಿಭಟನೆಯಲ್ಲಿ ಸಚಿವ ಕೆ.ಜೆ. ಜಾರ್ಜ್, ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ, ಸಚಿವ ರಾಮಲಿಂಗಾ ರೆಡ್ಡಿ, ಶಾಸಕ ರಿಜ್ವಾನ್ ಅರ್ಷದ್, ಎಚ್.ಎಂ. ರೇವಣ್ಣ, ನಾಗರಾಜ್ ಯಾದವ್ ಮತ್ತಿತರರು ಇದ್ದರು.

'ಕೊಡಿ ಕೊಡಿ ಬರ ಪರಿಹಾರ ಕೊಡಿ, ನಮ್ಮ ತೆರಿಗೆ ನಮ್ಮ ಹಕ್ಕು, ನರೇಂದ್ರ ಚೊಂಬೇಶ್ವರನಿಗೆ ಧಿಕ್ಕಾರ. ಚೊಂಬು ಕೊಟ್ಟ ಮೋದಿಗೆ, ಕರ್ನಾಟಕಕ್ಕೆ ಖಾಲಿ ಚೊಂಬು ಕೊಟ್ಟ ಬಿಜೆಪಿಗೆ ಧಿಕ್ಕಾರ ಎಂದು ಪ್ರತಿಭಟನೆನಿರತರು ಘೋಷಣೆ ಕೂಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT