ಬೆಂಗಳೂರು: ಬಿಬಿಎಂಪಿಯಲ್ಲಿ 2019ರಿಂದ ನಡೆದಿರುವ ಕಾಮಗಾರಿಗಳ ತನಿಖೆಗೆ ಸರ್ಕಾರ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಿರುವುದನ್ನು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ವಿರೋಧಿಸಿದ್ದಾರೆ.
ನಾಲ್ಕು ವರ್ಷಗಳ ಹಿಂದಿನ ಕಾಮಗಾರಿಯನ್ನು ಈಗ ಹೇಗೆ ತನಿಖೆ ಮಾಡಲಾಗುತ್ತದೆ. ಇದು ಸರಿಯಲ್ಲ. ಬಾಕಿ ಬಿಲ್ ಮೊತ್ತವನ್ನು ಆಗಸ್ಟ್ 31 ರೊಳಗೆ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಮುಂದಿನ ಹೋರಾಟ ನಿರ್ಧರಿಸಲಾಗುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು.
ಶೇ. 15 ಕಮಿಷನ್ ಬಗ್ಗೆ ಯಾರೋ ಒಬ್ಬ ಗುತ್ತಿಗೆದಾರ ಮಾನಸಿಕ ಒತ್ತಡದಿಂದ ಹೇಳಿದ್ದಾರೆ. ಅವರು ನಮ್ಮ ಸಂಘದ ಸದಸ್ಯ ಅಲ್ಲ. ಅವರು ಹೇಳಿಕೆ ವಾಪಸ್ ಪಡೆಯಲಿದ್ದಾರೆ. ಕಮಿಷನ್ ಪಡೆಯುತ್ತಿರುವ ಬಗ್ಗೆ ಯಾರಾದರೂ ಸಾಕ್ಷಿ ನೀಡಿದರೆ ನಾನೂ ಹೋರಾಟ ಮಾಡುತ್ತೇನೆ ಎಂದರು.
ಈ ಸರ್ಕಾರ ಬಂದ ಮೇಲೆ ಹಣ ಬಿಡುಗಡೆ ಮಾಡಿಲ್ಲ. ಒಂದು ಹೊಸ ಕಾರ್ಯದೇಶವನ್ನೂ ನೀಡಿಲ್ಲ. ಕಮಿಷನ್ ಪಡೆಯುತ್ತಿರುವುದು ಹೇಗೆ ಎಂದು ಪ್ರಶ್ನಿಸಿದರು.
ಶೇ. 40 ಕಮಿಷನ್ಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ, ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿಯವರ ನೇತೃತ್ವದ ಸಮಿತಿ ರಚಿಸಲಿದೆ. ಅದಕ್ಕೆ ಎಲ್ಲ ದಾಖಲೆಗಳನ್ನು ನೀಡಲಾಗುತ್ತದೆ. ಸುಮಾರು 20 ಪುಸ್ತಕಗಳ ದಾಖಲೆ ಇದೆ ಎಂದು ಕೆಂಪಣ್ಣ ಮಾಹಿತಿ ನೀಡಿದರು.