ಬೆಂಗಳೂರು: ಕೋವಿಡ್ 19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮುಂದಿನ ಕಾರ್ಯತಂತ್ರಗಳ ಕುರಿತು ಚರ್ಚಿಸಲು ಕಾರ್ಯಪಡೆಯ ಮಹತ್ವದ ಸಭೆ ಸೋಮವಾರ ನಡೆಯಲಿದೆ.
ಈ ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್,ಆರೋಗ್ಯ ಸಚಿವ ಬಿ. ಶ್ರೀರಾಮುಲು ಮತ್ತು ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಭಾಗವಹಿಸಲಿದ್ದಾರೆ.
ಲಾಕ್ಡೌನ್ ಮುಂದುವರಿಸದಿರಲು ಈಗಾಗಲೇ ರಾಜ್ಯ ಸರ್ಕಾರ ನಿರ್ಧರಿಸಿದೆ. ಮುಂದೆ ಅನುಸರಿಸಬೇಕಾದ ಕಠಿಣ ಕ್ರಮಗಳ ಕುರಿತೂ ಸಭೆಯಲ್ಲಿ ಚರ್ಚೆ ನಡೆಯಲಿದೆ. ಸೋಂಕಿತರನ್ನು ಪತ್ತೆ ಹಚ್ಚಿ, ಚಿಕಿತ್ಸೆಗೆ ಒಳಪಡಿಸುವ ಉದ್ದೇಶದಿಂದ ರಚಿಸಲಾದ ವಾರ್ಡ್ ಮತ್ತು ಬೂತ್ಮಟ್ಟದ ಸಮಿತಿಗಳ ಕಾರ್ಯ ಚಟುವಟಿಕೆ ಕುರಿತು ಮಾರ್ಗಸೂಚಿಯನ್ನು ಅಂತಿಮಗೊಳಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಸರ್ಕಾರಿ ವೈದ್ಯಕೀಯ ಕಾಲೇಜುಗಳು ಶೇ 80ರಷ್ಟು ಹಾಸಿಗೆಗಳನ್ನು ನೀಡಿವೆ. ಆದರೆ, ಖಾಸಗಿ ಆಸ್ಪತ್ರೆಗಳು ಈವರೆಗೆ ಶೇ 20ರಷ್ಟು ಹಾಸಿಗೆಗಳನ್ನು ಮಾತ್ರ ಬಿಟ್ಟು ಕೊಟ್ಟಿದ್ದು, ಕಳ್ಳಾಟ ಆಡುತ್ತಿವೆ. ಅಲ್ಲದೆ, ಲಕ್ಷಣರಹಿತ ಸೋಂಕಿತರನ್ನು ದಾಖಲಿಸಿಕೊಂಡು ಹಣ ವಸೂಲಿ ಮಾಡುತ್ತಿರುವ ದೂರುಗಳೂ ಸರ್ಕಾರಕ್ಕೆ ಬಂದಿವೆ.
ಲಕ್ಷಣರಹಿತ ಸೋಂಕಿತರನ್ನು ಕೋವಿಡ್ ಆರೈಕೆ ಕೇಂದ್ರಗಳಲ್ಲಿ ದಾಖಲಿಸುವಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ. ಆದರೂ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡುವ ನೆಪದಲ್ಲಿ ದಾಖಲು ಮಾಡುತ್ತಿವೆ. ಅದನ್ನು ತಡೆಯಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯೂ ಸೇರಿದಂತೆ ಇತರ ಕಾಯ್ದೆಗಳಡಿ ಆದೇಶ ಹೊರಡಿಸುವ ಸಾಧ್ಯತೆ ಇದೆ.