ಬೆಂಗಳೂರು: ನಗರದಲ್ಲಿ ಮಳೆಹಾನಿ ತಡೆಗೆ ಮುನ್ನೆಚ್ಚರಿಕೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಲು ವಿಧಾನಸೌಧದಲ್ಲಿ ಕರೆದಿದ್ದ ಸಭೆಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಡವಾಗಿ ಬಂದಿದ್ದರಿಂದ ಅಸಮಾಧಾನಗೊಂಡ ಬಿಜೆಪಿ ಶಾಸಕರು ಸಭೆಯಿಂದ ಹೊರ ನಡೆದರು.
ಬೆಳಿಗ್ಗೆ 11 ಗಂಟೆಗೆ ಶಿವಕುಮಾರ್ ಅಧ್ಯಕ್ಷತೆಯಲ್ಲಿ ಸಭೆ ನಿಗದಿಯಾಗಿತ್ತು. 12 ಗಂಟೆಯಾದರೂ ಅವರು ಸಭೆಗೆ ಬರಲಿಲ್ಲ. ಬಿಜೆಪಿ ಶಾಸಕರಾದ ಎಸ್. ಟಿ. ಸೋಮಶೇಖರ್, ಡಾ.ಸಿ.ಎನ್. ಅಶ್ವತ್ಥ ನಾರಾಯಣ, ಬೈರತಿ ಬಸವರಾಜ, ಎಸ್.ಆರ್. ವಿಶ್ವನಾಥ್ ಮತ್ತಿತರರು 12 ಗಂಟೆಯ ಬಳಿಕ ಸಭೆಯಿಂದ ಹೊರ ನಡೆದರು.
ಬೆಂಗಳೂರಿನ ಶಾಸಕರ ಸಭೆಯಲ್ಲಿ ಡಿ.ಕೆ ಶಿವಕುಮಾರ್
'ಭಾನುವಾರ ಸಂಜೆ ವಾಟ್ಸ್ ಆ್ಯಪ್ ಸಂದೇಶದ ಮೂಲಕ ನಮಗೆ ಸಭೆಗೆ ಆಹ್ವಾನ ನೀಡಲಾಗಿತ್ತು. ಬೆಳಿಗ್ಗೆ 11 ಗಂಟೆಗೆ ಸಭೆ ಆರಂಭವಾಗಲಿದೆ ಎಂದು ಮಾಹಿತಿ ನೀಡಿದ್ದರು. ಸಮಯಕ್ಕೆ ಸರಿಯಾಗಿ ನಾವು ಬಂದಿದ್ದೇವೆ. ಆದರೆ, ಉಪ ಮುಖ್ಯಮಂತ್ರಿಯವರು ವಿಳಂಬವಾಗುವ ಕುರಿತು ನಮಗೆ ಯಾವುದೇ ಮಾಹಿತಿ ನೀಡಿರಲಿಲ್ಲ' ಎಂದು ಬಿಜೆಪಿ ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು.
'ನಾವು ಕೂಡ ಸಚಿವರಾಗಿ ಕೆಲಸ ಮಾಡಿದವರು. ಈ ಹಿಂದೆ ಈ ರೀತಿ ಆಗಿರಲಿಲ್ಲ. ಸಚಿವರು ಸಭೆಗೆ ಬರುವುದು ತಡವಾದರೆ ಸಂಬಂಧಿಸಿದವರಿಗೆ ಮಾಹಿತಿ ನೀಡಬೇಕು. ನಾವು ಸಮಯಕ್ಕೆ ಸರಿಯಾಗಿ ಬಂದಿದ್ದೇವೆ. ಸಭೆ ಕರೆದವರೇ ಬಂದಿಲ್ಲ. ಅಧಿಕಾರಿಗಳಿಗೆ ತಿಳಿಸಿ ಬಂದಿದ್ದೇವೆ. ನಮಗೆ ಬೇರೆ ಕಾರ್ಯಕ್ರಮಗಳಿವೆ. ಇದು ಸಭೆಯ ಬಹಿಷ್ಕಾರ ಅಲ್ಲ' ಎಂದರು.
12 ಗಂಟೆಯ ಬಳಿಕ ವಿಧಾನಸೌಧಕ್ಕೆ ಬಂದ ಶಿವಕುಮಾರ್ ಸಭೆ ನಡೆಸುತ್ತಿದ್ದಾರೆ.