ಗುಂಡೇಟಿನ ಗುರುತು ಪತ್ತೆಯಾಗಿಲ್ಲ:
‘ಬಾಹ್ಯ ಮರಣೋತ್ತರ ಪರೀಕ್ಷೆಯಲ್ಲಿ ಗುಂಡೇಟಿನ ಗುರುತು ಪತ್ತೆಯಾಗಿಲ್ಲ. ಪಕ್ಕೆಯ ಭಾಗಕ್ಕೆ ಬಲವಾದ ಪೆಟ್ಟು ಬಿದ್ದು ಅರ್ಜುನ ಮೃತಪಟ್ಟಿದ್ದಾನೆ’ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್ ಹೇಳಿದರು.
‘ಕಾರ್ಯಾಚರಣೆ ವೇಳೆ ಲೋಪವಾಗಿಲ್ಲ. ಅರಿವಳಿಕೆ ಮದ್ದು ಮಿಸ್ ಫೈರ್ ಕುರಿತು ಬಗ್ಗೆ, ಇಂಜೆಕ್ಷನ್ ಬಳಕೆ ಬಗ್ಗೆ ತನಿಖೆ ನಡೆಯಲಿದ್ದು, ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದೇವೆ’ ಎಂದು ಹೇಳಿದರು.
ಮಾವುತ ವಿನು ರೋದನ
‘ನನ್ನ ಆನೆಯನ್ನು ಬದುಕಿಸಿ ಕೊಡಿ. ನನ್ನೊಂದಿಗೆ ಕಳಿಸಿ. ಎಂಥ ರಾಜನ್ನ ಮಿಸ್ ಮಾಡಿಕೊಂಡೆ’ ಎಂದು ಅರ್ಜುನನ ಕಳೇಬರ ತಬ್ಬಿಕೊಂಡು ಮಾವುತ ವಿನು ರೋದಿಸುತ್ತಿದ್ದ ದೃಶ್ಯಗಳು ಮನ ಕಲಕುವಂತಿದ್ದವು.
ಅರ್ಜುನನ ಸೊಂಡಿಲು ತಬ್ಬಿ ಕೊಂಡು, ‘ಆನೆ ಬದುಕಿಸಿಕೊಡಿ. ಇಲ್ಲವೇ ನನ್ನ, ಕುಟುಂಬವನ್ನು ಅರ್ಜುನನ ಜೊತೆ ಮಣ್ಣು ಮಾಡಿ. ಅರ್ಜುನ ಸತ್ತಿಲ್ಲ ಎಂದು ನನ್ನ ಹೆಂಡತಿ, ಮಕ್ಕಳಿಗೆ ಹೇಳಿದ್ದೇನೆ’ ಎಂದು ರೋದಿಸಿದರು. ಈ ವೇಳೆ ಅರಣ್ಯಾಧಿಕಾರಿ ಶಿಲ್ಪಾ ಅವರ ಕಣ್ಣಾಲಿಗಳೂ ತೇವಗೊಂಡಿದ್ದವು.
ಅರ್ಜುನನ ಅಂತ್ಯಸಂಸ್ಕಾರ:
ಕಾರ್ಯಾಚರಣೆ ವೇಳೆ ಕಾಡಾನೆ ದಾಳಿಯಿಂದ ಮೃತಪಟ್ಟ ಅರ್ಜುನನಿಗೆ, ಆಕ್ರೋಶ, ದುಃಖ, ಕಣ್ಣೀರಿನ ನಡುವೆ ಮಂಗಳವಾರ ಸಕಲೇಶಪುರ ತಾಲ್ಲೂಕಿನ ದಬ್ಬಳಿಕಟ್ಟೆ ಅರಣ್ಯದ ನೆಡುತೋಪಿನಲ್ಲಿ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಯಿತು.