ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೇವರಾಜೇಗೌಡ ಮಾನಸಿಕ ಅಸ್ವಸ್ಥ: ಡಿ.ಕೆ. ಶಿವಕುಮಾರ್ ಕಿಡಿ

Published 18 ಮೇ 2024, 11:22 IST
Last Updated 18 ಮೇ 2024, 11:22 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಜೆಪಿ ಮುಖಂಡ ದೇವರಾಜೇಗೌಡ ಮಾನಸಿಕ ಅಸ್ವಸ್ಥ. ಆತನ ಆರೋಪಕ್ಕೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.

ಸುದ್ದಿಗಾರರ ಜತೆ ಶನಿವಾರ ಮಾತನಾಡಿದ ಅವರು, ‘ತಲೆ ಕೆಟ್ಟವರನ್ನು ಆಸ್ಪತ್ರೆಗೆ ಸೇರಿಸಬೇಕಿದೆ. ಅಂತಹವರು ಆಡುವ ಮಾತುಗಳಿಗೆ ಮಾಧ್ಯಮಗಳು ಪ್ರಚಾರ ಕೊಡುವುದು ಸರಿಯಲ್ಲ’ ಎಂದರು.

‘ದೇವರಾಜೇಗೌಡನ ಜತೆ ನಾನು ಏನನ್ನೂ ಮಾತನಾಡಿಲ್ಲ. ನಾನು ಈ ರಾಜ್ಯದ ಉಪ ಮುಖ್ಯಮಂತ್ರಿ. ಸಾವಿರಾರು ಜನರು ನನ್ನನ್ನು ಭೇಟಿಮಾಡುತ್ತಾರೆ. ಅವರೆಲ್ಲರನ್ನೂ ಸ್ಕ್ಯಾನ್‌ ಮಾಡಿ ನೋಡಲು ಆಗುವುದಿಲ್ಲ. ನಾನು ಯಾರ ಜತೆಗೂ ತಪ್ಪು ಮಾತನಾಡಿಲ್ಲ. ಆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ’ ಎಂದರು.

‘ಬೌರಿಂಗ್‌ ಕ್ಲಬ್‌ನ ಕೊಠಡಿ ಸಂಖ್ಯೆ 110ಕ್ಕೆ ₹5 ಕೋಟಿ ನಗದು ಕಳುಹಿಸಿದ್ದರು’ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ‘ಏನಾದರೂ ಒಳ್ಳೆಯ ವಿಚಾರ ಇದ್ದರೆ ಮಾತನಾಡಿ. ರಾಜ್ಯದಲ್ಲಿ ಮಳೆ, ಬೆಳೆ, ಬರಗಾಲ ಇದರ ಬಗ್ಗೆ ಬೇಕಿದ್ದರೆ ಮಾತನಾಡಿ’ ಎಂದು ಹೇಳಿದರು.

‘ತಮ್ಮ ಕುಟುಂಬದ ವಿರುದ್ಧ ಪಿತೂರಿ ನಡೆಯುತ್ತಿದೆ’ ಎಂಬ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡರ ಹೇಳಿಕೆ ಬಗ್ಗೆ ಕೇಳಿದಾಗ, ‘ಈ ದಿನ ಗೌಡರ ಜನ್ಮದಿನ. ಅವರು ದೇವಸ್ಥಾನಕ್ಕೆ ಹೋಗಿ ಬಂದಿದ್ದಾರೆ. ಅವರಿಗೆ ದೇವರು ಒಳ್ಳೆಯ ಆರೋಗ್ಯ, ಸಂತೋಷ, ನೆಮ್ಮದಿ ಕೊಡಲಿ. ದುಃಖದಿಂದ ಹೊರಬರಲಿ ಎಂದು ಸರ್ಕಾರದ ಪರವಾಗಿ ಮತ್ತು ವೈಯಕ್ತಿಕವಾಗಿ ಶುಭ ಹಾರೈಸುತ್ತೇನೆ’ ಎಂದರು.

ಬಿಡಿಎ ವಾಣಿಜ್ಯ ಸಂಕೀರ್ಣಗಳನ್ನು ಖಾಸಗಿಯವರಿಗೆ ಗುತ್ತಿಗೆಗೆ ನೀಡುವ ಕುರಿತು ಕೇಳಿದಾಗ, ‘ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗಲೇ ನಿರ್ಧಾರ ಆಗಿತ್ತು. ಆ ಬಳಿಕ ನಮ್ಮ ಸರ್ಕಾರ ಅದನ್ನು ಮುಂದುವರಿಸಿದೆ. ಬಿಜೆಪಿ ಸರ್ಕಾರದ ಅವಧಿಯ ನಿರ್ಧಾರ ಅದು. ಸರ್ಕಾರಕ್ಕೆ ಆದಾಯ ಪಡೆಯುವುದಕ್ಕಾಗಿ ತೀರ್ಮಾನ ಮಾಡಲಾಗಿದೆ’ ಎಂದರು.

‘ಎಲ್ಲ ಮಾಹಿತಿಯನ್ನೂ ದಾಖಲೆಸಹಿತ ಸಂಗ್ರಹಿಸಿದ್ದೇನೆ. ಚುನಾವಣಾ ಪ್ರಕ್ರಿಯೆ ಮುಗಿದ ಬಳಿಕ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ, ಆಮ್‌ ಆದ್ಮಿ ಪಕ್ಷ ಎಲ್ಲರಿಗೂ ಉತ್ತರ ನೀಡುತ್ತೇನೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT