ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಣಿನಿ ಸೂತ್ರ ಪರಿಹಾರ: ತರ್ಕಬದ್ಧವಲ್ಲ -ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

Last Updated 21 ಡಿಸೆಂಬರ್ 2022, 22:30 IST
ಅಕ್ಷರ ಗಾತ್ರ

ಸಿರಿಗೆರೆ: ‘ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಪಿಎಚ್‌.ಡಿ ವಿದ್ಯಾರ್ಥಿ ರಿಷಿ ಅತುಲ್ ರಾಜಪೋಪಟ್ಅವರು ‘ಪಾಣಿನಿಮಹರ್ಷಿಯ’ಸೂತ್ರದ ಸಮಸ್ಯೆಯೊಂದಕ್ಕೆಪರಿಹಾರಹುಡುಕಿರುವುದುತರ್ಕಬದ್ಧವಲ್ಲಮತ್ತು ಅಮಾನ್ಯವಾದುದಾಗಿದೆ’ ಎಂದು ತರಳಬಾಳು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಪಾಣಿನಿ ಮಹರ್ಷಿಯ ‘ಅಷ್ಟಾಧ್ಯಾಯಿ’ ಸಂಸ್ಕೃತ ವ್ಯಾಕರಣ ಗ್ರಂಥವನ್ನು ಆಳವಾಗಿ ಅಧ್ಯಯನ ಮಾಡಿ, ಜಗತ್ತಿನಲ್ಲಿಯೇ ಮೊಟ್ಟ ಮೊದಲು ಸಾಫ್ಟ್‌ವೇರ್ ರೂಪಿಸಿರುವ ಸ್ವಾಮೀಜಿ, ರಾಜಪೋಪಟ್ ಸಲ್ಲಿಸಿರುವ ಪ್ರಬಂಧದ ಮೂಲ ಪ್ರತಿಯನ್ನು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಪಡೆದುಕೊಂಡು ಪರಿಶೀಲಿಸಿದ್ದಾರೆ.

‘ಪಾಣಿನಿ ಸೂತ್ರದಲ್ಲಿ ‘1.4.2 – ವಿಪ್ರತಿಷೇದೇ ಪರಮ್ ಕಾರ್ಯಂ’ ಭೇದಿಸಲು ಯಾವುದೇ ಒಗಟಿಲ್ಲ. ಭಾರತೀಯ ಸಂಪ್ರದಾಯದಲ್ಲಿ ಇದನ್ನು ಚೆನ್ನಾಗಿ ಅರ್ಥೈಸಿರುವ ಸಾಂಪ್ರದಾಯಿಕ ತಿಳಿವಳಿಕೆ ಹೀಗಿದೆ– ‘ಸಮಾನ ಸಾಮರ್ಥ್ಯದ ಎರಡು ನಿಯಮಗಳ ನಡುವಿನ ಸಂಘರ್ಷದ ಸಂದರ್ಭದಲ್ಲಿ, ವ್ಯಾಕರಣದ ಸರಣಿ ಕ್ರಮದಲ್ಲಿ ನಂತರ ಬರುವ ನಿಯಮವು ಗೆಲ್ಲುತ್ತದೆ. ಆದರೆ, ಪೋಪಟ್ ಅವರ ವಿಚಾರ ಬೇರೆಯದೇ ಆಗಿದೆ’ ಎಂದು ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.

‘ಪ್ರಸ್ತುತ ಸಂಶೋಧಕರ ಪ್ರಬಂಧವನ್ನು ಅನುಮೋದಿಸುವ ಮೊದಲು ವಿಶ್ವವಿದ್ಯಾಲಯದ ಮಾರ್ಗದರ್ಶಿಗಳು ಮತ್ತು ಪ್ರಾಧ್ಯಾಪಕರು ಕಾಳಜಿ ವಹಿಸಬೇಕಾಗಿತ್ತು’ ಎಂದು ಸ್ವಾಮೀಜಿ ತಿಳಿಸಿದ್ದಾರೆ.

‘ನಾವು ಆಳವಾದ ಅಧ್ಯಯನ, ಸಂಶೋಧನೆಗಳ ಮೂಲಕ 1993ರಲ್ಲಿಯೇ ಈ ಗ್ರಂಥಕ್ಕೆ ಸಾಫ್ಟ್‌ವೇರ್ ರೂಪಿಸಿ, ‘ಗಣಕಾಷ್ಟಾಧ್ಯಾಯಿ’ ಎಂದು ನಾಮಕರಣ ಮಾಡಿ ಆಸ್ಟ್ರೇಲಿಯಾದ ಮೆಲ್ಬರ್ನ್‌ ವಿಶ್ವವಿದ್ಯಾಲಯದಲ್ಲಿ 1994ರಲ್ಲಿ ಜರುಗಿದ 9ನೆಯ ವಿಶ್ವ ಸಂಸ್ಕೃತ ಸಮ್ಮೇಳನದಲ್ಲಿ ತಮ್ಮ ಸಂಶೋಧನೆಯ ವಿವರಗಳನ್ನು ಮಂಡಿಸಿ, ಸಾಫ್ಟ್‌ವೇರ್ ಪ್ರಾತ್ಯಕ್ಷಿಕೆ ತೋರಿಸಿದ್ದಕ್ಕೆ ಸಂಸ್ಕೃತ ವಿದ್ವಾಂಸರು ಸಂತಸ ವ್ಯಕ್ತಪಡಿಸಿದ್ದರು’ ಎಂದರು.

http://www.taralabalu.org/panini ವೆಬ್‌ಸೈಟ್ ಬಳಕೆ ಮಾಡಿ ಉಚಿತವಾಗಿ ಡೌನ್‌ಲೋಡ್ ಮಾಡಿಕೊಂಡು ವಿದ್ವಾಂಸರು ಗಮನಿಸಬಹುದು ಎಂದು ಅವರು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT