ಹಲಗೂರು: ಸಮೀಪದ ಭೀಮಾ ಜಲಾಶಯ ಚಿಕ್ಕ ತೊರೆಯಲ್ಲಿ ಮೂರು ಕಾಡಾನೆಗಳು ಕಾಣಿಸಿಕೊಂಡಿದ್ದು, ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.
ಭಾನುವಾರ ಬೆಳಿಗ್ಗೆ ಮಳವಳ್ಳಿ ಕಡೆಯಿಂದ ಬಂದ ಕಾಡಾನೆಗಳು ಭೀಮಾ ಜಲಾಶಯ ಚಿಕ್ಕ ತೊರೆ ಬಳಿ ಇರುವ ಮಾವು, ಬಾಳೆ, ಎಲೆ ತೋಟಗಳಲ್ಲಿ ನುಗ್ಗಿ ಫಸಲು ನಾಶ ಮಾಡಿವೆ. ಬಳಿಕ, ಚಿಕ್ಕ ತೊರೆಯಲ್ಲಿ ಬೀಡು ಬಿಟ್ಟಿವೆ.
ಶನಿವಾರ ಬೆಳಿಗ್ಗೆ ಮಳವಳ್ಳಿ ಸಮೀಪದ ದೋರನಹಳ್ಳಿ ಕೆರೆಯಲ್ಲಿ ಕಾಣಿಸಿಕೊಂಡ ನಾಲ್ಕು ಕಾಡಾನೆಗಳ ಪೈಕಿ ಒಂದು ಆನೆ ಮಳವಳ್ಳಿ ಸಮೀಪವೇ ಉಳಿದುಕೊಂಡಿದೆ. ಮೂರು ಕಾಡಾನೆಗಳು ಮಳವಳ್ಳಿ ಮಾರ್ಗವಾಗಿ ಚಿಕ್ಕ ತೊರೆಗೆ ಬಂದಿವೆ.
‘ಆನೆಗಳನ್ನು ಕಾಡಿಗಟ್ಟಲು ಸಿಡಿಮದ್ದು ಸಿಡಿಸಲಾಯಿತು. ಆದರೂ ಆನೆಗಳು ಕಾಡಿಗೆ ಹೋಗುತ್ತಿಲ್ಲ. ಸಂಜೆ ಬಳಿಕ ಮತ್ತೆ ಕಾರ್ಯಾಚರಣೆ ನಡೆಸುತ್ತೇವೆ’ಎಂದು ಅರಣ್ಯಾಧಿಕಾರಿ ಪ್ರವೀಣ್ ಕುಮಾರ್ ತಿಳಿಸಿದರು.