ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಯಾಂಟ್ರೋ ರವಿ ವಿರುದ್ಧ ಎಫ್‌ಐಆರ್‌

ದಲಿತ ಮಹಿಳೆಗೆ ವಂಚನೆ, ಅತ್ಯಾಚಾರ, ಕ್ರಿಮಿನಲ್‌ ಪಿತೂರಿ ಆರೋಪ:
Last Updated 2 ಜನವರಿ 2023, 19:26 IST
ಅಕ್ಷರ ಗಾತ್ರ

ಮೈಸೂರು: ಪರಿಶಿಷ್ಟ ಸಮುದಾಯದ ಮಹಿಳೆಯನ್ನು ವಂಚಿಸಿ, ಜಾತಿ ನಿಂದನೆ ಮಾಡಿ, ಹಲ್ಲೆ ನಡೆಸಿ, ವರದಕ್ಷಿಣೆ ಕಿರುಕುಳ ನೀಡಿದ ಆರೋಪದ ಮೇರೆಗೆ ಕೆ.ಎಸ್‌.ಮಂಜುನಾಥ್ ಅಲಿಯಾಸ್‌ ಸ್ಯಾಂಟ್ರೋ ರವಿ ವಿರುದ್ಧ ಇಲ್ಲಿನ ವಿಜಯನಗರ ಠಾಣೆಯಲ್ಲಿ ಸೋಮವಾರ ಎಫ್‌ಐಆರ್‌ ದಾಖಲಾಗಿದೆ.

ನಗರದ ಸಂತ್ರಸ್ತ ಮಹಿಳೆ ಹಾಗೂ ಅವರ ಕುಟುಂಬದ ಸದಸ್ಯರು ಒಡನಾಡಿ ಸೇವಾ ಸಂಸ್ಥೆಯ ನೆರವು ಪಡೆದು ದೂರು ದಾಖಲಿಸಿದ್ದಾರೆ.

ವರದಕ್ಷಿಣೆ ನಿಷೇಧ ಕಾಯ್ದೆ, ಪರಿಶಿಷ್ಟರ ಮೇಲಿನ ದೌರ್ಜನ್ಯ ನಿಯಂತ್ರಣ ಕಾಯ್ದೆ, ಐಪಿಸಿ 506 (ಉದ್ದೇಶಪೂರ್ವಕ ಅವಹೇಳನ, ಮನಶಾಂತಿ ಕೆಡಿಸುವ ಪ್ರಯತ್ನ), 504 (ಕ್ರಿಮಿನಲ್‌ ಪಿತೂರಿ), 376 (ಅತ್ಯಾಚಾರ), 270 (ಪ್ರಾಣಹಾನಿಕರವಾದ ಸೋಂಕು ಹರಡುವ ಯತ್ನ), ಬಲವಂತದ ಗರ್ಭಪಾತ (313) ಹಾಗೂ 323 (ಹಲ್ಲೆ), 498ಎ (ಕೌಟುಂಬಿಕ ದೌರ್ಜನ್ಯ) ಅಡಿ ಪ್ರಕರಣ ದಾಖಲಿಸಲಾಗಿದೆ.

‘ತನಗೆ ಲೈಂಗಿಕ ಸೋಂಕು ಇದೆ ಎಂಬುದು ಗೊತ್ತಿದ್ದರೂ ಆರೋಪಿ ಪತಿ ನನಗೂ ಕೂಡ ಸೋಂಕನ್ನು ತಗುಲಿಸಿದ್ದಾನೆ. ಸೋಂಕು ಪ್ರಾಣಾಂತಕವಾಗಿದ್ದು, ಔಷಧಿ ಇಲ್ಲ. ವರದಕ್ಷಿಣೆ ಕಿರುಕುಳ ನೀಡಿ, ಒತ್ತಾಯಪೂರ್ವಕ ಗರ್ಭಪಾತ ಮಾಡಿಸಿದ್ದಾನೆ. ಹಣದ ದುರಾಸೆಯಿಂದ ಮತ್ತೊಬ್ಬರೊಂದಿಗೆ ಲೈಂಗಿಕ ಸಂಪರ್ಕ ಮಾಡುವಂತೆ ಒತ್ತಾಯಿಸಿದ್ದಾನೆ‘ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.

’ದೌರ್ಜನ್ಯದ ಘಟನೆಗಳು 2019–2022ರ ನಡುವೆ ನಡೆದಿದೆ. ಆರೋಪಿಯು ಉದ್ಯೋಗ ನೀಡುವ ನೆಪದಲ್ಲಿ ಕರೆಸಿಕೊಂಡು ಮತ್ತು ಬರುವ ಜ್ಯೂಸ್‌ ನೀಡಿ, ಪ್ರಜ್ಞಾವಸ್ಥೆ ಕಳೆದುಕೊಂಡ ಬಳಿಕ ಅತ್ಯಾಚಾರ ನಡೆಸಿದ್ದ. ನನ್ನ ಬೆತ್ತಲೆ ಫೋಟೋಗಳನ್ನು ತೆಗೆದು ಬೆದರಿಕೆ ಹಾಕಿದ್ದ. ನಂತರ ಮದುವೆಯಾದ. ಮದುವೆಯಾದ ಬಳಿಕವೂ ಹಿಂಸೆ ನೀಡಿದ‘ ಎಂದು ಆರೋಪಿಸಿದ್ದಾರೆ.

ಕಮಿಷನರ್‌ ಭೇಟಿ: ವಿಜಯನಗರ ಠಾಣೆಯಲ್ಲಿ ದೂರು ದಾಖಲಾಗುವ ಮುನ್ನ ಯುವತಿ ಮತ್ತು ಕುಟುಂಬದ ಸದಸ್ಯರು ನಗರ ಪೊಲೀಸ್‌ ಆಯುಕ್ತ ಬಿ.ರಮೇಶ್‌ ಅವರನ್ನು ಭೇಟಿ ಮಾಡಿದ್ದರು. ಅವರ ಸೂಚನೆ ಮೇರೆಗೆ ಠಾಣೆಗೆ ತೆರಳಿ ದೂರು ನೀಡಿದ್ದರು.

‘ಮಹಿಳೆಗೆ ಹಾಗೂ ಆಕೆಯ ಕುಟುಂಬದವರಿಗೆ ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲುವುದಿಲ್ಲ‘ ಎಂದು ಒಡನಾಡಿ ಸಂಸ್ಥೆಯ ಸಂಚಾಲಕರಾದ ಎಂ.ಎಲ್‌.ಪರಶುರಾಂ ಮತ್ತು ಸ್ಟ್ಯಾನ್ಲಿ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT