ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯ ಇಲಾಖೆ ಬಡ್ತಿಯೇ ನಕಲಿ: ನೇರ ನೇಮಕವಾದ 300 ಮಂದಿಗೆ ಹುದ್ದೆಗಳೇ ಇಲ್ಲ

Last Updated 17 ಫೆಬ್ರುವರಿ 2019, 20:13 IST
ಅಕ್ಷರ ಗಾತ್ರ

ಬೆಂಗಳೂರು: ಅರಣ್ಯ ಇಲಾಖೆಯಲ್ಲಿ ನಕಲಿ ಹುದ್ದೆಗಳನ್ನು ಸೃಷ್ಟಿಸಿ 1,163 ಮಂದಿಗೆ ಅರಣ್ಯ ರಕ್ಷಕ ಹುದ್ದೆಯಿಂದ ಉಪ ವಲಯ ಅರಣ್ಯಾಧಿಕಾರಿ (ಫಾರೆಸ್ಟರ್‌) ಹುದ್ದೆಗೆ ಬಡ್ತಿ ನೀಡಿರುವ ಪ್ರಕರಣ ಬಯಲಾಗಿದೆ.

1997–2007ರ ಅವಧಿಯಲ್ಲಿ 565 ಮಂದಿಗೆ ಹಾಗೂ 2008–2016ರ ಅವಧಿಯಲ್ಲಿ 598 ಮಂದಿಗೆ ಅಕ್ರಮವಾಗಿ ಬಡ್ತಿ ನೀಡಲಾಗಿದೆ. ಈ ಬಗ್ಗೆ ನಾಲ್ವರು ಉದ್ಯೋಗಾಕಾಂಕ್ಷಿಗಳು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಹಿಂದಿನ ಅರಣ್ಯ ಸಚಿವ ಆರ್‌.ಶಂಕರ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ಅವರಿಗೆ 2018ರ ನವೆಂಬರ್‌ 30ರಂದು ದೂರು ನೀಡಿದ್ದರು.

‘ಪ್ರಕರಣದ ಬಗ್ಗೆ ಕೂಲಂಕಷವಾಗಿ ‍ಪರಿಶೀಲಿಸಿ ಸೂಕ್ತ ತನಿಖೆ ನಡೆಸಿ ವರದಿ ಸಲ್ಲಿಸಬೇಕು’ ಎಂದು ಆರ್‌.ಶಂಕರ್ ಅವರು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಗೆ 2018ರ ಡಿಸೆಂಬರ್‌ 5ರಂದು ನಿರ್ದೇಶನ ನೀಡಿದ್ದರು. ಅದೇ ತಿಂಗಳಲ್ಲಿ ಸಚಿವರು ಬದಲಾದರು. ಆ ಬಳಿಕ ಪ್ರಕರಣ ತನಿಖೆ ಒಂದಿಂಚೂ ಮುಂದೆ ಹೋಗಿಲ್ಲ. ಇದಕ್ಕೆ ರಾಜಕೀಯ ಹಾಗೂ ಅಧಿಕಾರಿಗಳ ಒತ್ತಡವೇ ಕಾರಣ ಎಂಬ ಆರೋಪ ವ್ಯಕ್ತವಾಗಿದೆ.

ಅಕ್ರಮಕ್ಕೆ ಸಂಬಂಧಿಸಿದಂತೆ ಎಂಟು ಅರಣ್ಯ ವಲಯಗಳ ದಾಖಲೆಗಳು ಲಭ್ಯವಾಗಿದ್ದು, ಹುದ್ದೆಯ ಮಾಹಿತಿ ಇರುವ ರಿಜಿಸ್ಟರ್, ವಾಸ್ತವ ಹುದ್ದೆ, ನಕಲಿ ಖಾಲಿ ಹುದ್ದೆಗಳ ಬಗ್ಗೆ ದಾಖಲೆಗಳು ಸಿಕ್ಕಿವೆ. ಜತೆಗೆ ಕಾಲಕಾಲಕ್ಕೆ ಬಡ್ತಿ ಸಂಬಂಧ ಸರ್ಕಾರ ಹೊರಡಿಸಿದ ಆದೇಶಗಳೂ ಈ ದಾಖಲೆಯಲ್ಲಿ ಅಡಕಗೊಂಡಿವೆ. ಪ್ರತಿಕ್ರಿಯೆಗೆ ಅರಣ್ಯ ಸಚಿವ ಸತೀಶ ಜಾರಕಿಹೊಳಿ ಲಭ್ಯರಾಗಲಿಲ್ಲ.

ಇಲಾಖೆಯ ಎಂಟು ವೃತ್ತಗಳಲ್ಲಿ ವೃಂದ ಹಾಗೂ ನೇಮಕಾತಿ ನಿಯಮ, ಸಾಮಾನ್ಯ ನೇಮಕಾತಿ ನಿಯಮಗಳಿಗೆ ಸಂಬಂಧಿಸಿ ಸರ್ಕಾರದ ಸುತ್ತೋಲೆಗಳನ್ನು ಅನುಸರಿಸದೆ ನಕಲಿ ಖಾಲಿ ಹುದ್ದೆಗಳ ರಿಜಿಸ್ಟರ್‌ ಸೃಷ್ಟಿಸುವ ಮೂಲಕ ಈ ಬಡ್ತಿ ನೀಡಲಾಗಿದೆ. ಬಡ್ತಿ ಪಡೆದವರ ಮೂಲ ವೇತನ ಹೆಚ್ಚಳದಿಂದಾಗಿ ಪ್ರತಿ ಆರ್ಥಿಕ ವರ್ಷದಲ್ಲಿ ಕನಿಷ್ಠ ₹5 ಕೋಟಿಯಿಂದ ₹6 ಕೋಟಿಗಳಷ್ಟು ಹೊರೆ ಬೀಳುತ್ತಿದೆ. ಭತ್ಯೆಗಳನ್ನು ಸೇರಿಸಿ ಲೆಕ್ಕ ಹಾಕಿದರೆ ಕಳೆದ ಐದು ವರ್ಷಗಳಲ್ಲಿ ರಾಜ್ಯ ಸರ್ಕಾರಕ್ಕೆ ₹50 ಕೋಟಿಯಿಂದ ₹75 ಕೋಟಿಗಳಷ್ಟು ಹೆಚ್ಚುವರಿ ಹೊರೆ ಬಿದ್ದಿದೆ. ಜತೆಗೆ, ಹೊಸದಾಗಿ ನೇಮಕಗೊಂಡ 300 ಮಂದಿಗೆ ಹುದ್ದೆ ನೀಡಲು ಆಗುತ್ತಿಲ್ಲ ಎಂದು ಇಲಾಖಾ ಮೂಲಗಳು ತಿಳಿಸಿವೆ.

ವೃಂದ ಮತ್ತು ನೇಮಕಾತಿ ನಿಯಮಗಳ ಪ್ರಕಾರವೇ, ಮೇಲ್ದರ್ಜೆಗೆ ಏರಿಸಿದ ಫಾರೆಸ್ಟರ್‌ ಹುದ್ದೆಗಳನ್ನು ತುಂಬಬೇಕಿದೆ. ಆದರೆ, ಈ ಹುದ್ದೆಗಳನ್ನು ಕೇವಲ ಬಡ್ತಿ ನೇಮಕಾತಿ ಕೋಟಾ ಮೂಲಕ ತುಂಬಲಾಯಿತು. ಇದರಿಂದ, ಸರ್ಕಾರದ ಬೊಕ್ಕಸಕ್ಕೆ ಮತ್ತಷ್ಟು ನಷ್ಟ ಉಂಟಾಯಿತು. ಈ ಹಗರಣಕ್ಕೆ ಇನ್ನೊಂದು ಸೇರ್ಪಡೆ ಎಂದರೆ, ಕರ್ನಾಟಕ ರಾಜ್ಯ ನಾಗರಿಕ ನಿಯಮಗಳು (ಬಡ್ತಿ, ವೇತನ ಮತ್ತು ನೇಮಕಾತಿ) ಕಾಯ್ದೆ 1973 ಮತ್ತು ನಿಯಮ 1975 (ಸೆಕ್ಷನ್‌ 3 (1)ಎ ಮತ್ತು ನಿಯಮ 2 (3)) ಉಲ್ಲಂಘಿಸಿ ಪೂರ್ವಾನ್ವಯವಾಗುವಂತೆ ಬಡ್ತಿ/ ಅರ್ಹತೆಯನ್ನು ನೀಡಿರುವುದು.

ಉದಾಹರಣೆಗೆ, ಬಡ್ತಿ ನೀಡುವಾಗ ಒಂದು ಪ್ರಮಾಣ ನಿಗದಿ ಮಾಡಲಾಗುತ್ತದೆ. ಅಂದರೆ ಮಂಜೂರಾದ 100 ಹುದ್ದೆಗಳಿದ್ದರೆ ಶೇ 20ರಷ್ಟು ಮಂದಿಗೆ ಬಡ್ತಿ ನೀಡಬಹುದೆಂದು ತೀರ್ಮಾನವಾಗಿರುತ್ತದೆ. ಆದರೆ, ಅರಣ್ಯ ಇಲಾಖೆಯಲ್ಲಿ ಮಂಜೂರಾದ ಹುದ್ದೆ 200 ಎಂದು ಸುಳ್ಳು ದಾಖಲೆ ತೋರಿಸಿ ಶೇ 40ರಷ್ಟು ಮಂದಿಗೆ ಬಡ್ತಿ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT