ಹುಬ್ಬಳ್ಳಿ: ನಗರವೂ ಸೇರಿದಂತೆ ಉತ್ತರ ಕರ್ನಾಟಕದ ವಿವಿಧೆಡೆ ಭಾನುವಾರ ಸಾಧಾರಣ ಮಳೆಯಾಗಿದೆ.
ವಿಜಯಪುರ ಜಿಲ್ಲೆಯ ನಿಡಗುಂದಿ ತಾಲ್ಲೂಕಿನ ಗೊಳಸಂಗಿ ಗ್ರಾಮದ ಇಂದಿರಾನಗರ ರಸ್ತೆಯೊಂದರಲ್ಲಿ ಬೃಹತ್ ಬೇವಿನ ಮರ ನೆಲಕ್ಕುರುಳಿದೆ. ಗೊಳಸಂಗಿಯ ಸುತ್ತಮುತ್ತಲೂ ಇನ್ನೂ ನಾಲ್ಕೈದು ಮರಗಳು ನೆಲಕ್ಕುರುಳಿವೆ.
ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಹಂಪಿ, ಕಡ್ಡಿರಾಂಪುರ, ಕಮಲಾಪುರ, ಧರ್ಮದಗುಡ್ಡ, ಕಾಳಘಟ್ಟ, ಹೊಸೂರು ಸೇರಿದಂತೆ ಹಲವೆಡೆ ಮಳೆಯಾಗಿದೆ. ಕೊಡಗು ಜಿಲ್ಲೆಯ ವಿವಿಧೆಡೆ ಹಾಗೂ ಕೊಪ್ಪಳ,ಯಾದಗಿರಿ ಮತ್ತು ಕಲಬುರ್ಗಿ ಜಿಲ್ಲೆಯ ಚಿತ್ತಾಪುರದಲ್ಲಿ ಭಾನುವಾರ ಸಂಜೆ ಮಳೆಯಾಯಿತು.
ಕೊಪ್ಪಳ ನಗರ ಸೇರಿದಂತೆ ತಾಲ್ಲೂಕಿನ ಭಾನಾಪುರ, ಕುಕನೂರು ಮತ್ತು ಮುನಿರಾಬಾದ್ನಲ್ಲಿ ಉತ್ತಮ ಮಳೆಯಾಯಿತು. ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಅರ್ಧ ಗಂಟೆಗೂ ಹೆಚ್ಚು ಹೊತ್ತು ಬಿರುಸಿನ ಮಳೆಯಾಯಿತು.
ಸಿಡಿಲು ಬಡಿದು ವ್ಯಕ್ತಿ ಸಾವು: ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕಿನ ಇಣಚಗಲ್ಲ ಗ್ರಾಮದ ಬಳಿ ಹೊಲದಲ್ಲಿ ಉಳುಮೆ ಮಾಡುತ್ತಿದ್ದ ಹುಲಗಪ್ಪ ಯಲ್ಲಪ್ಪ ಮಾದರ (38) ಭಾನುವಾರ ಸಂಜೆ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ.