ಬೆಂಗಳೂರು: ಐಎಎಸ್ ಅಧಿಕಾರಿ ಬಿ.ಶರತ್ ಸಲ್ಲಿಸಿರುವ ಅರ್ಜಿ ಸಂಬಂಧ ಕಾಯ್ದಿರಿಸಿರುವ ಆದೇಶವನ್ನು ಕೂಡಲೇ ಹೊರಡಿಸುವಂತೆ ಕೇಂದ್ರ ಆಡಳಿತ ನ್ಯಾಯಮಂಡಳಿಗೆ (ಸಿಎಟಿ) ಹೈಕೋರ್ಟ್ ನಿರ್ದೇಶನ ನೀಡಿದೆ.
ಮೈಸೂರು ಜಿಲ್ಲಾಧಿಕಾರಿ ಆಗಿದ್ದ ಶರತ್ ಅವರನ್ನು 2020 ಸೆಪ್ಟೆಂಬರ್ 28ರಂದು ವರ್ಗಾವಣೆ ಮಾಡಿ ಅವರ ಜಾಗಕ್ಕೆ ರೋಹಿಣಿ ಸಿಂಧೂರಿ ಅವರನ್ನು ಸರ್ಕಾರ ನೇಮಕ ಮಾಡಿತ್ತು. ಇದನ್ನು ಪ್ರಶ್ನಿಸಿ ಶರತ್ ಅವರು ಸಿಎಟಿ ಮೊರೆ ಹೋಗಿದ್ದರು.
ವಿಚಾರಣೆ ಪೂರ್ಣಗೊಳಿಸಿರುವ ಪೀಠ, 2020 ಡಿಸೆಂಬರ್ 22ರಂದು ಆದೇಶ ಕಾಯ್ದಿರಿಸಿದೆ. ಸಿಎಟಿ ನಿಯಮಗಳ ಪ್ರಕಾರ ಆದೇಶವನ್ನು ಮೂರು ವಾರಗಳ ತನಕ ಮಾತ್ರ ಕಾಯ್ದಿರಿಸಬಹುದು ಎಂದು ಶರತ್ ವಾದಿಸಿದ್ದಾರೆ.
ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ನೇತೃತ್ವದ ವಿಭಾಗೀಯ ಪೀಠ, ಅರ್ಜಿ ವಿಲೇವಾರಿ ಮಾಡಿತು. ಹೈಕೋರ್ಟ್ ಆದೇಶದ ಪ್ರತಿ ಸ್ವೀಕರಿಸಿದ ಎರಡು ವಾರಗಳಲ್ಲಿ ನಿರ್ಧಾರ ತೆಗೆದುಕೊಳ್ಳುವಂತೆ ಸಿಎಟಿಗೆ ತಿಳಿಸಿದೆ.