ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡು ಕಾಯಲು ಐಎಫ್‌ಎಸ್ ನಿರಾಸಕ್ತಿ: ಎರವಲು ಸೇವೆಯಲ್ಲೇ ಅಧಿಕಾರಿಗಳಿಗೆ ಸಂತೃಪ್ತಿ

Published 21 ನವೆಂಬರ್ 2023, 0:30 IST
Last Updated 21 ನವೆಂಬರ್ 2023, 0:30 IST
ಅಕ್ಷರ ಗಾತ್ರ

ಬೆಂಗಳೂರು: ಅರಣ್ಯ ಕಾಪಾಡಲು ಮನಸ್ಸಿಲ್ಲದ ಐಎಫ್‌ಎಸ್‌ ಅಧಿಕಾರಿಗಳು ರಾಜಧಾನಿ ಬೆಂಗಳೂರು ಬಿಟ್ಟು ಇತರೆ ಪ್ರದೇಶಗಳಿಗೆ ಹೋಗುತ್ತಿಲ್ಲ. ಇಲಾಖೆ ಬಿಟ್ಟು ನಿಗಮ, ಮಂಡಳಿಗಳ ಆಡಳಿತಾತ್ಮಕ ಹುದ್ದೆಗಳಿಗೇ
ಮುಗಿಬಿದ್ದಿದ್ದಾರೆ.

ತಂತ್ರಜ್ಞಾನ ಇಲಾಖೆ, ನಿಗಮ, ಮಂಡಳಿಗಳ ವ್ಯವಸ್ಥಾಪಕ ನಿರ್ದೇಶಕ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆಗಳಲ್ಲಿ ಕುಳಿತಿರುವ ಐಎಫ್‌ಎಸ್‌ ಅಧಿಕಾರಿಗಳು ಹಲವರಿದ್ದಾರೆ. ಕೆಲವು ಐಎಫ್‌ಎಸ್‌ ಅಧಿಕಾರಿಗಳು ಎರಡು– ಮೂರು ಹುದ್ದೆಗಳನ್ನೂ ಹೊಂದಿದ್ದಾರೆ. ಅಖಿಲ ಭಾರತ ಸೇವೆ ಗಳ (ಎಐಎಸ್‌) ನಿಯಮಗಳ ಪ್ರಕಾರ ಇದು ನಿಯಮಬಾಹಿರ. ಇದರ ಜತೆಗೆ, ತಂತ್ರಜ್ಞಾನ ಹಾಗೂ ನಿಗಮ–ಮಂಡಳಿಗಳಲ್ಲಿರುವ ಅರ್ಹರಿಗೆ ಬಡ್ತಿಯೂ ಸಿಗುತ್ತಿಲ್ಲ ಎನ್ನುವ ಕೂಗೂ ಕೇಳಿಬರುತ್ತಿದೆ.

ಎಐಎಸ್‌ ನಿಯಮಗಳ ಪ್ರಕಾರ, ರಾಜ್ಯಕ್ಕೆ ಒಟ್ಟು 100 ಐಎಫ್‌ಎಸ್‌ ಹುದ್ದೆಗಳು ಮಂಜೂರಾಗಿವೆ. ಇದರಲ್ಲಿ, ಕೇಂದ್ರಕ್ಕೆ ಶೇ 20ರಷ್ಟು ಹಾಗೂ ರಾಜ್ಯ ಸರ್ಕಾರದ ಅರಣ್ಯೇತರ ಹುದ್ದೆಗಳಿಗೆ ಶೇ 25ರಷ್ಟು ಐಎಫ್‌ಎಸ್‌
ಅಧಿಕಾರಿಗಳನ್ನು ಎರವಲು ಸೇವೆಯಲ್ಲಿ ನಿಯೋಜಿಸಬಹುದು. 

ರಾಜ್ಯದ ತಂತ್ರಜ್ಞಾನ, ಐಟಿ, ಇ–ಆಡಳಿತ, ಆಹಾರ ನಿಗಮ, ಪಶು ಸಂಗೋಪನೆ ವಿ.ವಿ ಸೇರಿದಂತೆ ನಿಗಮ– ಮಂಡಳಿಗಳ ವಿವಿಧ ಹುದ್ದೆಗಳಲ್ಲಿ 39 ಐಎಫ್‌ಎಸ್‌ ಅಧಿಕಾರಿಗಳಿದ್ದಾರೆ. ಆನೆ, ಹುಲಿ ಯೋಜನೆಗಳ ಕೇಂದ್ರ ಕಚೇರಿಗಳು ಆಯಾ ಯೋಜನೆಗೆ ಅನುಗುಣವಾದ ಸ್ಥಳದಲ್ಲಿರಬೇಕು. ಆದರೆ, ಅಂತಹ ಕಚೇರಿಗಳನ್ನು ಬೆಂಗಳೂರಿನಲ್ಲೇ ಸ್ಥಾಪಿಸಿಕೊಂಡು, ಐಎಫ್‌ಎಸ್‌ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.

‘ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಆದರೆ ಐಎಫ್‌ಎಸ್‌ ಅಧಿಕಾರಿಗಳು ಅರಣ್ಯ ಇಲಾಖೆ ಬಿಟ್ಟು ಬೇರೆ ಇಲಾಖೆಗಳಲ್ಲೇ ಆಸಕ್ತಿ ವಹಿಸಿ ಹುದ್ದೆ ಪಡೆದುಕೊಳ್ಳುತ್ತಿದ್ದಾರೆ. ನಮ್ಮ ಇಲಾಖೆಯಲ್ಲೇ ಇದ್ದು, ಎಲ್ಲ ವರ್ಗದ ಸಿಬ್ಬಂದಿಗೆ ಉತ್ತೇಜನ ನೀಡಬೇಕಾದದ್ದು ಹಿರಿಯ ಅಧಿಕಾರಿಗಳ ಕರ್ತವ್ಯ. ಆದರೆ, ಅವರು ಬೆಂಗಳೂರಿನಲ್ಲೇ ಉಳಿದು ಕೊಳ್ಳಬೇಕೆಂದು ಲಾಬಿ ನಡೆಸಿ, ನಿಗಮ–ಮಂಡಳಿಗಳಲ್ಲಿ ಹುದ್ದೆ ಪಡೆದು ಕೊಂಡಿದ್ದಾರೆ’

‘ಕೆಲವು ಕಡೆ ಹುದ್ದೆ ಸೃಷ್ಟಿಸಿಕೊಂಡು ಅಲ್ಲೇ ಸ್ಥಾಪನೆ ಯಾಗಿದ್ದಾರೆ’ ಎಂದು ಅರಣ್ಯ ಇಲಾಖೆಯ ಹಿರಿಯ
ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಿಸಿಎಫ್‌) ಮತ್ತು ಮುಖ್ಯ ಜಾಗೃತ ಅಧಿಕಾರಿಗಳ ಹುದ್ದೆಗಳು ರಾಜ್ಯದ ವಿವಿಧ ಪ್ರದೇಶಗಳಲ್ಲಿ ಖಾಲಿ ಇವೆ. ಆದರೆ ಈ ಹುದ್ದೆಗಳಿಗೆ ಹೋಗಲು ಐಎಫ್‌ಎಸ್‌ ಅಧಿಕಾರಿಗಳು ಇಚ್ಛಿಸುವು ದಿಲ್ಲ. ಅದರಲ್ಲೂ ಹಿರಿಯ ಶ್ರೇಣಿಯ ಐಎಫ್‌ಎಸ್‌ ಅಧಿಕಾರಿಗಳು ಆಯಕಟ್ಟಿನ ಜಾಗದಲ್ಲೇ ಇರಬೇಕೆಂದು ಬಯಸಿ, ನಿಗಮ–ಮಂಡಳಿಗಳಿಗೆ ನೇಮಕವಾಗುತ್ತಿದ್ದಾರೆ. ಇದರಿಂದ ಅರಣ್ಯ ಇಲಾಖೆಯ ಕಾರ್ಯ
ನಿರ್ವಹಣೆಗೆ ಹಿನ್ನಡೆಯಾಗಿದೆ’ ಎಂದು ಸಿಬ್ಬಂದಿ ದೂರಿದರು.

‘ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಬೆಂಗಳೂರು ಕಚೇರಿಯಿಂದ ಹೊರಬರಬೇಕು. ತಿಂಗಳಿಗೆ 15 ದಿನ ಅರಣ್ಯಕ್ಕೆ ಹೋಗಿ ವಾಸ ಮಾಡಿ, ಅಲ್ಲಿನ ಸಿಬ್ಬಂದಿಯನ್ನು ನೈತಿಕವಾಗಿ ಉತ್ತೇಜಿಸಬೇಕು’ ಎಂದು ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದರು. ಅದರಂತೆ ಆದೇಶವನ್ನೂ ಮಾಡಿದ್ದರು. ಆ ಆದೇಶವನ್ನು ಹಿರಿಯ ಅಧಿಕಾರಿಗಳು ಬಹಿರಂಗಪಡಿಸಿಲ್ಲ, ಅದರಂತೆ ನಡೆದುಕೊಂಡೂ ಇಲ್ಲ’ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಆರೋಪಿಸಿದರು.

ಮುಖ್ಯ ಕಾರ್ಯದರ್ಶಿಗೆ ಮನವಿ

‘ಕೆಲವು ಐಎಫ್‌ಎಸ್‌ ಅಧಿಕಾರಿಗಳು ನಿಗಮ– ಮಂಡಳಿಗಳಿಗೆ ನಿಯೋಜನೆಯಾಗಿ ಹತ್ತಾರು ವರ್ಷ ಕಳೆದರೂ ಮಾತೃ ಇಲಾಖೆಗೆ ವಾಪಸ್‌ ಬಂದಿಲ್ಲ. ಇಂತಹ ಅಧಿಕಾರಿಗಳು ಸೇರಿದಂತೆ ಎಐಎಸ್‌ ನಿಯಮ ಮೀರಿ ಹೆಚ್ಚಿನ ಸಂಖ್ಯೆಯಲ್ಲಿ ಎರವಲು ಸೇವೆಯಲ್ಲಿರುವ ಐಎಫ್‌ಎಸ್‌ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಅರಣ್ಯ ಇಲಾಖೆಯಲ್ಲೇ ಕೆಲಸ ನಿರ್ವಹಿಸುವಂತೆ ಸೂಚಿಸಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ಪತ್ರ ಬರೆದು ಮನವಿ ಮಾಡಿಕೊಳ್ಳಲಾಗಿದೆ. ಆದರೂ ಕ್ರಮವಾಗಿಲ್ಲ’ ಎಂದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.

ವೃಂದೇತರ ಹುದ್ದೆಯಲ್ಲಿರುವ (ಎಕ್ಸ್‌–ಕೇಡರ್‌) ಐಎಫ್‌ಎಸ್‌ ಅಧಿಕಾರಿಗಳು

ಸುದರ್ಶನ್‌ ಜಿ.ಎ.; ಸಿಇಒ, ರಾಜ್ಯ ಔಷಧಿ ಗಿಡಮೂಲಿಕೆಗಳ ಪ್ರಾಧಿಕಾರ (ಕೆಎಂಪಿಎ)

ಜಗತ್‌ ರಾಮ್; ಸದಸ್ಯ ಕಾರ್ಯದರ್ಶಿ, ಜೀವವೈವಿಧ್ಯ ಮಂಡಳಿ, 

ಮನೋಜ್‌ಕುಮಾರ್‌ ಶುಕ್ಲ; ಕಾರ್ಯನಿರ್ವಾಹಕ ನಿರ್ದೇಶಕ, ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ

ರವಿ ಬಿ.ಪಿ; ಪ್ರಧಾನ ಕಾರ್ಯದರ್ಶಿ, ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ (ಎಫ್‌ಇಇ) ಇಲಾಖೆ

ರಾಧಾದೇವಿ; ವ್ಯವಸ್ಥಾಪ‍ಕ ನಿರ್ದೇಶಕಿ, ಅರಣ್ಯ ಅಭಿವೃದ್ಧಿ ನಿಗಮ.

ಪಿ.ಸಿ. ರೇ; ಸದಸ್ಯ ಕಾರ್ಯದರ್ಶಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಪರಿಹಾರಾತ್ಮಕ ನೆಡುತೋಪು ನಿಧಿ ನಿರ್ವಹಣೆ ಮತ್ತು ಯೋಜನ ಪ್ರಾಧಿಕಾರ (ಕಾಂಪಾ)

ಮಹೇಶ್‌ ಬಿ. ಶಿರೂರ್; ವ್ಯವಸ್ಥಾಪಕ ನಿರ್ದೇಶಕ, ರಾಜ್ಯ ಅರಣ್ಯ ಕೈಗಾರಿಕಾ ನಿಗಮ ಲಿಮಿಟೆಡ್.

ಮನೋಜ್‌ಕುಮಾರ್; ವ್ಯವಸ್ಥಾಪಕ ನಿರ್ದೇಶಕ, ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್‌ ಲಿಮಿಟೆಟ್‌ (ಎಂಎಸ್‌ಐಎಲ್‌) ಮತ್ತು ವ್ಯವಸ್ಥಾಪಕ ನಿರ್ದೇಶಕ ಜಂಗಲ್‌ ಲಾಡ್ಜ್ಸ್‌.

ಶ್ರೀನಿವಾಸುಲು; ವ್ಯವಸ್ಥಾಪಕ ನಿರ್ದೇಶಕ, ಆಹಾರ ಮತ್ತು ನಾಗರಿಕ ಸರಬರಾಜು ನಿಗಮ.

ಗೋಕುಲ್‌ ಆರ್‌; ನಿರ್ದೇಶಕ, ತಾಂತ್ರಕ ಕೋಶ, ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆ

ಶಾಶ್ವತಿ ಮಿಶ್ರಾ; ಎಪಿಸಿಸಿಎಫ್‌, ಆನೆ ಯೋಜನೆ

ವಿಪಿನ್‌ ಸಿಂಗ್‌; ಯೋಜನಾ ನಿರ್ದೇಶಕ, ಮಾನವ ಸಂಪನ್ಮೂಲ ನಿರ್ವಹಣೆ ಸಂಸ್ಥೆ (ಎಚ್‌ಆರ್‌ಎಂಎಸ್‌)

ಮನೋಜ್‌ ಆರ್; ಮಿಷನ್‌ ನಿರ್ದೇಶಕ, ಇಸ್ರೇಲ್‌ ತಂತ್ರಜ್ಞಾನ ಆಧಾರಿತ ಸಮಗ್ರ ಕೃಷಿ ಮಿಷನ್‌ (ಐಟಿಬಿಐಎಫ್) ಮತ್ತು ಸಿಇಒ, ಇ–ಆಡಳಿತ ಕೇಂದ್ರ (ಸಿಇಜಿ)

ವೆಂಕಟೇಶನ್‌ ಎಸ್‌; ವರ್ಕಿಂಗ್‌ ಪ್ಲ್ಯಾನ್‌, ಬಳ್ಳಾರಿ

ರಮೇಶ್‌ ಕುಮಾರ್‌ ಪಿ; ವರ್ಕಿಂಗ್‌ ಪ್ಲ್ಯಾನ್‌, ಮೈಸೂರು

ಚಂದ್ರಶೇಖರ ನಾಯಕ್‌ ಕೆ.; ಚಾಮರಾನಗರ ವೃತ್ತ

ಕಮಲಾ ಕೆ; ವ್ಯವಸ್ಥಾಪಕ ನಿರ್ದೇಶಕಿ, ಗೇರು ಅಭಿವೃದ್ಧಿ ನಿಗಮ ನಿಯಮಿತ

ಶಿವಶಂಕರ್‌ ಎಸ್; ರಿಜಿಸ್ಟ್ರಾರ್, ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ

ಯಶ್‌ಪಾಲ್‌ ಕ್ಷೀರಸಾಗರ್‌; ಭದ್ರಾ ಹುಲಿ ಸಂರಕ್ಷಣೆ

ಡಿ. ಮಹೇಶ್‌ಕುಮಾರ್‌; ಕಾರ್ಯನಿರ್ವಹಾಕ ನಿರ್ದೇಶಕ, ಚಾಮರಾಜೇಂದ್ರ ವನ್ಯಜೀವಿ ಉದ್ಯಾನ

ಎಸ್‌. ಪ್ರಭಾಕರನ್‌; ನಿರ್ದೇಶಕ, ಬಂಡೀಪುರ ರಾಷ್ಟ್ರೀಯ ಉದ್ಯಾನ

ಎ.ವಿ. ಸೂರ್ಯಸೇನ್‌; ಕಾರ್ಯನಿರ್ವಾಹಕ ನಿರ್ದೇಶಕ, ಬನ್ನೇರುಘಟ್ಟ ಜೈವಿಕ ಉದ್ಯಾನ

ಪ್ರಶಾಂತ್‌ ಶಂಕಿನಮಠ; ಕಾರ್ಯನಿರ್ವಾಹಕ ನಿರ್ದೇಶಕ, ರಾಜ್ಯ ಅರಣ್ಯ ಕೈಗಾರಿಕಾ ನಿಗಮ ಲಿಮಿಟೆಡ್ (ಕೆಎಸ್‌ಎಫ್‌ಐಸಿ)

ದಿನೇಶ್‌ಕುಮಾರ್‌ ವೈ.ಕೆ; ಪ್ರಾದೇಶಿಕ ನಿರ್ದೇಶಕ, ಪರಿಸರ, ಉಡುಪಿ ಮತ್ತು ಮಂಗಳೂರು

ಎಚ್‌.ಸಿ. ಗಿರೀಶ್‌; ಆಯುಕ್ತ, ಜಲಾನಯನ ಅಭಿವೃದ್ಧಿ ಇಲಾಖೆ

ಶಿಂಧೆ ನಿಲೇಶ್‌ ಡಿಯೊಬ; ನಿರ್ದೇಶಕ; ದಾಂಡೇಲಿ ರಾಷ್ಟ್ರೀಯ ಉದ್ಯಾನ

ಪ್ರಶಾಂತ್‌ ಪಿ.ಕೆ.ಎಂ; ವ್ಯವಸ್ಥಾಪಕ ನಿರ್ದೇಶಕ; ಸಾಬೂನು ಮತ್ತು ಮಾರ್ಜಕ ನಿಯಮಿತ

ಉದಯಕುಮಾರ್‌ ಜೋಗಿ; ವರ್ಕಿಂಗ್ ಪ್ಲ್ಯಾನ್‌, ಚಿಕ್ಕಮಗಳೂರು

ಶ್ರೀಪತಿ ಬಿ.ಎಸ್‌; ಡಿಸಿಎಫ್‌, ಸಂಶೋಧನೆ, ಧಾರವಾಡ

ನಿರ್ಮಲಾ ಎನ್‌.ಕೆ; ಡಿಸಿಎಫ್‌, ಸಂಶೋಧನೆ, ಮಡಿಕೇರಿ

ಸೌರಬ್‌ ಕುಮಾರ್; ಡಿಸಿಎಫ್‌, ಮೈಸೂರು ವನ್ಯಜೀವಿ ವಿಭಾಗ

ಲೇಖಾರಜ್‌ ಮೀನಾ; ಕುದುರೆಮುಖ ವನ್ಯವೀಜಿ ಉಪವಿಭಾಗ

ಯೋಗೇಶ್‌ ಸಿ.ಕೆ; ಕಾರ್ಗಲ್‌ ವನ್ಯಜೀವಿ ಉಪವಿಭಾಗ

ಸೂರ್ಯ ದೇವ ಪಾಠಕ್‌; ಭೂಸ್ವಾಧೀನ ಮತ್ತು ಅರಣ್ಯ ಘಟಕ; ಜಲಸಂಪನ್ಮೂಲ ಇಲಾಖೆ

ಹರ್ಷಕುಮಾರ ಚಿಕ್ಕನರಗುಂದ; ಫೀಲ್ಡ್‌ ಡೈರೆಕ್ಟರ್‌, ರಾಜೀವ್‌ಗಾಂಧಿ ರಾಷ್ಟ್ರೀಯ ಉದ್ಯಾನ, ನಾಗರಹೊಳೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT