ಉಡುಪಿ: ‘ಸುವರ್ಣ ತ್ರಿಭುಜ ಬೋಟ್ ದುರಂತಕ್ಕೆ ಹಾಗೂ ಮೀನುಗಾರರ ಸಾವಿಗೆ ಕಾರಣವಾದ ನೌಕಾದಳದ ಬೃಹತ್ ಯುದ್ಧನೌಕೆ ಐಎನ್ಎಸ್ ಕೊಚ್ಚಿನ್ ಹಡಗಿನ ತಳಭಾಗಕ್ಕೆ ಹಾನಿಯಾಗಿರುವ ಚಿತ್ರ ಲಭ್ಯವಾಗಿದೆ’ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸಾಮಾಜಿಕ ಜಾಲತಾಣದಲ್ಲಿ ಫೋಟೊ ಹಾಕಿದ್ದಾರೆ.
‘ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಕ್ಷಣ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.
‘ಲೋಕಸಭಾ ಚುನಾವಣೆಗೂ ಮೊದಲೇ ಬೋಟ್ ಅವಘಡದ ಮಾಹಿತಿ ಸಿಕ್ಕಿದ್ದರೂ ರಕ್ಷಣಾ ಇಲಾಖೆ ಹಾಗೂ ಬಿಜೆಪಿ ನಾಯಕರು ರಾಜಕೀಯ ಲಾಭಕ್ಕಾಗಿ ಮರೆಮಾಚುವ ಪ್ರಯತ್ನ ಮಾಡಿದ್ದಾರೆ’ ಎಂದು ಪ್ರಮೋದ್ ಟೀಕಿಸಿದ್ದಾರೆ.