ಚಿಕ್ಕಮಗಳೂರು: ‘6ರಿಂದ 12ನೇ ತರಗತಿವರೆಗೆ ಬೆಳಿಗ್ಗೆಯಿಂದ ಸಂಜೆವರೆಗೆ ಭೌತಿಕ ತರಗತಿ ನಡೆಸುವಂತೆ ಮೌಖಿಕ ಸೂಚನೆ ನೀಡಲಾಗಿದೆ. ದಸರಾ ನಂತರ ಮುಂದಿನ ಕ್ರಮದ ಬಗ್ಗೆ ಯೋಚನೆ ಮಾಡುತ್ತೇವೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಯಾವ ವಿದ್ಯಾರ್ಥಿಗೂ ತರಗತಿಗೆ ಹಾಜರಾಗುವಂತೆ ಬಲವಂತ ಮಾಡಬಾರದು ಎಂದು ತಿಳಿಸಿದ್ದೇವೆ. ಭೌತಿಕ ತರಗತಿ ಆರಂಭಿಸಿರುವುದು ವಿದ್ಯಾರ್ಥಿಗಳಿಗೂ ಖುಷಿಯಾಗಿದೆ’ ಎಂದು ಪ್ರತಿಕ್ರಿಯಿಸಿದರು.
‘ಬಹಳಷ್ಟು ಜಿಲ್ಲೆಗಳಲ್ಲಿ ಕೋವಿಡ್ ಪಾಸಿಟಿವಿಟಿ ಪ್ರಮಾಣ ಕಡಿಮೆಯಾಗಿದೆ. ಹಲವು ಜಿಲ್ಲೆಗಳಲ್ಲಿ ಈ ಪ್ರಮಾಣ ಸೊನ್ನೆಗೆ ಇಳಿದಿದೆ. ಹೀಗಾಗಿ, ಶಾಲೆ ನಡೆಸಲು ತೊಂದರೆ ಆಗುವುದಿಲ್ಲ’ ಎಂದು ಉತ್ತರಿಸಿದರು.