ಬೆಂಗಳೂರು: ರಾಜ್ಯ ಮಹಿಳಾ ಆಯೋಗ ತಾರತಮ್ಯ ಮಾಡುತ್ತಿದೆ ಎಂದು ಜೆಡಿಎಸ್ ರಾಜ್ಯ ಘಟಕ ಆರೋಪಿಸಿದೆ.
ಈ ಕುರಿತು ‘ಎಕ್ಸ್’ನಲ್ಲಿ ಮಾಹಿತಿ ಹಂಚಿಕೊಂಡಿರುವ ಜೆಡಿಎಸ್, ‘ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆ ವಿರುದ್ಧ ವಿದ್ಯುತ್ ವೇಗದಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿರುವ ಆಯೋಗ, ಕಾಂಗ್ರೆಸ್ ನಾಯಕರ ವಿಚಾರದಲ್ಲಿ ಮೌನವಹಿಸಿದೆ’ ಎಂದು ದೂರಿದೆ.
‘ಕುಮಾರಸ್ವಾಮಿ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಮಹಿಳಾ ಆಯೋಗದ ಅಧ್ಯಕ್ಷರು ಅತ್ಯುತ್ಸಾಹದಿಂದ ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದಾರೆ. ನಟಿ–ಸಂಸದೆ ಹೇಮಾಮಾಲಿನಿ ಅವರ ಬಗ್ಗೆ ಹೇಳಿಕೆ ಕೊಟ್ಟ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ ಬಗ್ಗೆ ಚಕಾರ ಎತ್ತಿಲ್ಲ. ‘ಮಹಿಳೆಯರು ಅಡುಗೆ ಮನೆಗೇ ಲಾಯಕ್ಕು’ ಎಂದಿದ್ದ ದಾವಣಗೆರೆ ಶಾಸಕ ಶಾಮನೂರು ಶಿವಶಂಕರಪ್ಪ ಬಗ್ಗೆ ಜಾಣ ಮೌನವಹಿಸಿದ್ದಾರೆ’ ಎಂದು ಟೀಕಿಸಿದೆ.