ಚಿಕ್ಕಬಳ್ಳಾಪುರ: ‘ಗಣಿ, ಶಿಕ್ಷಣ, ಅಬಕಾರಿ, ಗುತ್ತಿಗೆ ಹಾಗೂ ಭೂ ಮಾಫಿಯಾಗಳನ್ನೆಲ್ಲ ಯಾವ ಮುಲಾಜಿಲ್ಲದೆ ಬಗ್ಗುಬಡಿಯುತ್ತೇವೆ.ನಮ್ಮ ಸರ್ಕಾರ ಯಾರ ಮುಲಾಜಿನಲ್ಲಿಯೂ ಇಲ್ಲ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ತಾಲ್ಲೂಕಿನ ಗುಂಗೀರ್ಲಹಳ್ಳಿಯಲ್ಲಿ ಶನಿವಾರ ‘ಕಂದಾಯ ದಾಖಲೆ ಮನೆಬಾಗಿಲಿಗೆ ಯೋಜನೆ’ಗೆ ಚಾಲನೆ ನೀಡಿದರು. ‘ಈ ಹಿಂದಿನ ಸರ್ಕಾರಗಳು ಮಾಫಿಯಾ ಮುಲಾಜಿನಲ್ಲಿ ಇದ್ದ ಕಾರಣ ಅವರನ್ನು ಮುಟ್ಟುತ್ತಿರಲಿಲ್ಲ. ಆದರೆ, ಭಾಷಣ ಮಾತ್ರ ಬಡವರ ಪರವಾಗಿದ್ದವು’ ಎಂದರು.
‘ಈ ಹಿಂದಿನ ಸರ್ಕಾರಗಳು ‘ಗರೀಬಿ ಹಠಾವೋ’ ಎಂದು ಹೇಳಿದವು. ಆದರೆ ಏನನ್ನೂ ಮಾಡಲಿಲ್ಲ. ಪರಿಶಿಷ್ಟರು, ಹಿಂದುಳಿದವರು ಉದ್ಧಾರ ಮಾಡುತ್ತೇವೆ ಎಂದು70 ವರ್ಷಗಳಿಂದ ಹೇಳಿದರು. ಅವರು ಉದ್ಧಾರವಾಗಿದ್ದರೆ ನಾವು ಈ ಕಾರ್ಯ ಮಾಡುವ ಅಗತ್ಯವಿರಲಿಲ್ಲ.ಬಡವರ ಹೆಸರಿನಲ್ಲಿ ಇಷ್ಟು ವರ್ಷ ರಾಜಕಾರಣ ನಡೆದಿದೆ. ‘ನಮ್ಮದು ಜನಸೇವೆ ಗಾಗಿ ರಾಜಕಾರಣ. ಅವರದ್ದು ಅಧಿಕಾರಕ್ಕಾಗಿ ರಾಜಕಾರಣ ಎಂದು ಕಾಂಗ್ರೆಸ್ ಪಕ್ಷದ ಹೆಸರು ಹೇಳದೆ ಟೀಕಿಸಿದರು.
‘ಮಾಸಾಶನ, ಜಮೀನಿನ ನಕ್ಷೆ ಹೀಗೆಕಂದಾಯ ಇಲಾಖೆಯ ದಾಖಲೆಗಳಿಗೆ ಅಲೆದಾಡುವವರು ಬಡವರೇ ಆಗಿರು ತ್ತಾರೆ. ಬಡವರು ಹೀಗೆ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ‘ಕಂದಾಯದಾಖಲೆ ಮನೆಬಾಗಿಲಿಗೆ ಯೋಜನೆ’ ಜಾರಿಗೊಳಿಸಿದ್ದೇವೆ. ಸರ್ಕಾರವನ್ನೇ ಬಡವರ ಮನೆ ಬಾಗಿಲಿಗೆ ಕೊಂಡೊಯ್ಯಲಾಗುವುದು. ಇದೊಂದು ಕಂದಾಯ ಕ್ರಾಂತಿ’ ಎಂದು ಬೊಮ್ಮಾಯಿ ಬಣ್ಣಿಸಿದರು.
‘ರಾಜ್ಯದ ಎಲ್ಲ ಗ್ರಾಮಗಳಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗಿದೆ. 55 ಲಕ್ಷ ರೈತರ ಮನೆಗಳಿಗೆ ತೆರಳಿ ಐದು ಕೋಟಿ ದಾಖಲೆ ನೀಡುತ್ತಿದ್ದೇವೆ. ಈ ಜನಪರ ಕಾರ್ಯಕ್ರಮ ನಿಮ್ಮ ಮನೆಗೆ ಮುಟ್ಟಿದಾಗ ಇಂತಹ ಕಾರ್ಯಕ್ರಮ ಕೊಟ್ಟ ಸರ್ಕಾರಕ್ಕೆ ಒಳ್ಳೆಯದಾಗಲಿ, ಜನ ಬೆಂಬಲ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸಿ’ ಎಂದು ಮನವಿ ಮಾಡಿದರು.
ಡೀಮ್ಡ್ ಅರಣ್ಯ ವ್ಯಾಪ್ತಿಯಲ್ಲಿರುವ ಕಂದಾಯ ಭೂಮಿಯನ್ನು ಇಲಾಖೆ ವಾಪಸ್ ಪಡೆಯುವ ಕೆಲಸ ಆಗುತ್ತಿದೆ. ಜಮೀನು ಸರ್ವೆಗೆ ಸಂಬಂಧಿಸಿ ಎರಡು ಲಕ್ಷ ಅರ್ಜಿ ಬಾಕಿ ಇವೆ. ಅವುಗಳ ವಿಲೇವಾರಿಗೆ 3 ಸಾವಿರ ಭೂ ಮಾಪಕರನ್ನು ನೇಮಿಸಲಾಗುವುದು ಎಂದುಕಂದಾಯ ಸಚಿವ ಆರ್.ಅಶೋಕ ಹೇಳಿದರು.
ಮನೆ ನಿರ್ಮಾಣಕ್ಕೆ ಭೂ ಪರಿವರ್ತನೆ ಮಾಡಲು ಒಂದೆರಡು ತಿಂಗಳಾಗುತ್ತಿದೆ. ಆದರೆ ಮುಂದಿನ ದಿನಗಳಲ್ಲಿ ಕೇವಲ ಎರಡೇದಿನಗಳಲ್ಲಿ ಭೂ ಪರಿವರ್ತನೆ ಮಾಡಿಕೊಡುವ ವ್ಯವಸ್ಥೆ ಜಾರಿಗೊಳಿಸುತ್ತೇವೆ ಎಂದರು.