ಹೀಗೊಂದು ಸುದ್ದಿ ಕಾಂಗ್ರೆಸ್– ಬಿಜೆಪಿ ಕೇಂದ್ರ ಕಚೇರಿಯಲ್ಲಿ ಹರಿದಾಡುತ್ತಿದೆ. ‘ಪಕ್ಷಕ್ಕೆ ಕೈಕೊಟ್ಟು ವಲಸೆ ಹೋದವರನ್ನು ಸೇರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ’ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಖುಲ್ಲಂಖುಲ್ಲಾ ಹೇಳಿರುವುದೇ ಅವರ ಒಂದು ಕಾಲದ ಆಪ್ತೇಷ್ಟರನ್ನು ಇಕ್ಕಟ್ಟಿಗೆ ಸಿಲುಕಿಸಿದೆಯಂತೆ. ಮರಳಿ ಯತ್ನವ ಮಾಡು ಎಂಬುದನ್ನು ಪಾಲಿಸುತ್ತಿರುವ ಕೆಲವರು, ತಮ್ಮ ಜಾತಿಗೆ ಸೇರಿದ, ನಾಯಕರ ಜತೆ ನಿಕಟ ಬಾಂಧವ್ಯ ಇರುವ ಶಾಸಕರನ್ನು ಸಂಪರ್ಕಿಸಿರುವ ಸಚಿವರೊಬ್ಬರು, ‘ಹೇಗಾದರೂ ಮಾಡಿ ಸಾಹೇಬರ ಭೇಟಿಗೆ ಅವಕಾಶ ಕೊಡಿಸಪ್ಪ’ ಎಂದು ದುಂಬಾಲು ಬಿದ್ದಿದ್ದಾರೆ. ಅದನ್ನು ನಾಯಕರ ಕಿವಿಗೆ ಹಾಕಿದಾಗ, ‘ಅಧಿಕಾರಕ್ಕಾಗಿ ಪಕ್ಷ ಬಿಟ್ಟು ಹೋಗುವಾಗ ಬುದ್ದಿ ಎಲ್ಲೋಗಿತ್ತಂತೆ. ಈಗ ಅವರ ಪರ ವಕಾಲತ್ ವಹಿಸಿಕೊಂಡು ಬಂದಿದ್ಯಾ. ನಡೀ ನಡೀ’ ಎಂದು ಗದರಿದರಂತೆ ಸಿದ್ದರಾಮಯ್ಯ.