ಬೆಂಗಳೂರು: ಎಲ್ಲ ಸಚಿವರು ವಿಧಾನಸೌಧದಲ್ಲಿರುವ ತಮ್ಮ ಕಚೇರಿಯಲ್ಲಿ ಪ್ರತಿ ಗುರುವಾರ ಇರಬೇಕು ಎಂದುಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸೂಚನೆ ನೀಡಿದ್ದರೂ, ಮೊದಲ ಗುರುವಾರ (ಜೂನ್ 24) ಬಹುತೇಕ ಸಚಿವರು ವಿಧಾನಸೌಧದ ಕಡೆ ಸುಳಿಯಲೇ ಇಲ್ಲ.
ಇದೇ 16ರಂದು ರಾಜ್ಯಕ್ಕೆ ಬಂದಿದ್ದ ಅರುಣ್ ಸಿಂಗ್, ಆಡಳಿತಕ್ಕೆ ಚುರುಕು ಮುಟ್ಟಿಸಲು ಮತ್ತು ಸರ್ಕಾರದ ವರ್ಚಸ್ಸು ಹೆಚ್ಚಿಸಲು ಎಲ್ಲ ಸಚಿವರು ವಿಧಾನಸೌಧದ ತಮ್ಮ ಕಚೇರಿಗೆ ಬಂದು ಶಾಸಕರಿಗೆ ಹಾಗೂ ಸಾರ್ವಜನಿಕರಿಗೆ ಲಭ್ಯವಾಗಬೇಕೆಂದು ಸೂಚಿಸಿದ್ದರು. ಆದರೆ, ಮೊದಲ ಗುರುವಾರ ಕೇವಲ ಐವರು ಸಚಿವರು ವಿಧಾನಸೌಧದಲ್ಲಿರುವ ತಮ್ಮ ಕಚೇರಿಗೆ ಬಂದಿದ್ದರು.
ಸಚಿವರಾದ ಜಗದೀಶ ಶೆಟ್ಟರ್, ಆರ್. ಅಶೋಕ, ಅರವಿಂದ ಲಿಂಬಾವಳಿ, ಆರ್. ಶಂಕರ್ ಮತ್ತು ಕೆ. ಗೋಪಾಲಯ್ಯ ಮಾತ್ರ ಬಂದಿದ್ದರು, ಅವರೂ ಕೆಲವು ತಾಸು ಮಾತ್ರ ಕಚೇರಿಯಲ್ಲಿದ್ದು ಕಾರ್ಯನಿರ್ವಹಿಸಿದರು.