ಗಂಗಾವಳಿ ನದಿ ಪ್ರವಾಹಕ್ಕೆ ಅಂಕೋಲಾ ತಾಲ್ಲೂಕಿನ ಗುಳ್ಳಾಪುರದ ಸೇತುವೆ ಮಧ್ಯಭಾಗದಿಂದ ಕೊಚ್ಚಿ ಹೋಗಿದೆ. ಇದರಿಂದ ಗುಳ್ಳಾಪುರ- ಹಳವಳ್ಳಿ ಸಂಪರ್ಕ ಕಡಿತವಾಗಿದೆ. ಈ ಭಾಗದಲ್ಲಿ 3,000ಕ್ಕಿಂತ ಹೆಚ್ಚು ಮನೆಗಳಿವೆ. ಹತ್ತಕ್ಕೂ ಹೆಚ್ಚು ಗ್ರಾಮಗಳಿಗೆ ಈ ಸೇತುವೆ ಸಂಪರ್ಕ ಕೊಂಡಿಯಾಗಿತ್ತು. ಈ ಸೇತುವೆಯಲ್ಲಿ ಸಾಗಿದರೆ ಗುಳ್ಳಾಪುರ ತಲುಪಲು ಕೇವಲ 10 ಕಿಲೋಮೀಟರ್ ದೂರವಾಗುತ್ತಿತ್ತು. ತಾಲ್ಲೂಕು ಕೇಂದ್ರ ಅಂಕೋಲಾಕ್ಕೆ 50 ಕಿ.ಮೀ, ಯಲ್ಲಾಪುರಕ್ಕೆ 25 ಕಿ.ಮೀ ದೂರವಾಗುತ್ತಿತ್ತು. ಈಗ ಮತ್ತಿಘಟ್ಟ ಮೂಲಕ ಅಂಕೋಲಾಕ್ಕೆ 150 ಕಿ.ಮೀ., ಯಲ್ಲಾಪುರಕ್ಕೆ ಸುಮಾರು 100 ಕಿ.ಮೀ ಸಂಚರಿಸಬೇಕಿದೆ. ಇಡೀ ಪ್ರದೇಶವೇ ದ್ವೀಪದಂತಾಗಿದೆ.