ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡಕತ್ತರಿಯಲ್ಲಿ ಕುಣಿಗಲ್‌ ಕುದುರೆ ಫಾರ್ಮ್‌

ಟೌನ್‌ಶಿಪ್‌ ನಿರ್ಮಾಣ ಪ್ರಸ್ತಾವ: ಸಂಸದ ಸುರೇಶ್, ಶಾಸಕ ರಂಗನಾಥ್ ಆಸಕ್ತಿ?
Published 1 ಜನವರಿ 2024, 0:09 IST
Last Updated 1 ಜನವರಿ 2024, 0:09 IST
ಅಕ್ಷರ ಗಾತ್ರ

ಬೆಂಗಳೂರು: ಜಗತ್ತಿನ ಕುದುರೆ ತಳಿ ಸಂವರ್ಧನಾ ಕೇಂದ್ರಗಳಲ್ಲಿ ಅತ್ಯಂತ ಪುರಾತನವಾದವುಗಳಲ್ಲಿ ಒಂದಾಗಿರುವ ‘ಕುಣಿಗಲ್‌ ಕುದುರೆ ಫಾರ್ಮ್‌’ನ ಜಮೀನಿನಲ್ಲಿ ಅತ್ಯಾಧುನಿಕ ಸೌಕರ್ಯಗಳಿರುವ ಉಪನಗರ ನಿರ್ಮಾಣಕ್ಕೆ ನಗರಾಭಿವೃದ್ಧಿ ಇಲಾಖೆ ಮುಂದಾಗಿದೆ. ಇದರಿಂದಾಗಿ ಎರಡೂವರೆ ಶತಮಾನ
ಗಳ ಇತಿಹಾಸವಿರುವ ಕುದುರೆ ಫಾರ್ಮ್‌ ಭವಿಷ್ಯ ಅಡಕತ್ತರಿಯಲ್ಲಿ ಸಿಲುಕಿದೆ.

ಕುದುರೆ ಫಾರ್ಮ್‌ನ 100 ಎಕರೆಯನ್ನು ಬೆಂಗಳೂರು ಟರ್ಫ್‌ ಕ್ಲಬ್‌ ಸ್ಥಳಾಂತರಕ್ಕೆ ಬಳಸುವ ಪ್ರಸ್ತಾವವಿದೆ. ಉಳಿದ 321 ಎಕರೆ ಜಮೀನಿನಲ್ಲಿ ಟೌನ್‌ಶಿಪ್‌ ನಿರ್ಮಿಸಬೇಕೆಂಬ ಪ್ರಸ್ತಾವವನ್ನು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್‌ ಮತ್ತು ಕುಣಿಗಲ್‌ ಶಾಸಕ ಡಾ.ಎಚ್‌.ಡಿ. ರಂಗನಾಥ್‌ ಮುಂದಿಟ್ಟಿದ್ದಾರೆ.

‘ಪಶುಸಂಗೋಪನಾ ಇಲಾಖೆಯ ಸ್ವಾಧೀನದಲ್ಲಿರುವ ಜಮೀನನ್ನು ನಗರಾಭಿವೃದ್ಧಿ ಇಲಾಖೆಯ ಸ್ವಾಧೀನಕ್ಕೆ ಪಡೆದು ಟೌನ್‌ಶಿಪ್‌ ನಿರ್ಮಿಸಬೇಕಾಗುತ್ತದೆ. ಈ ಕುರಿತು ಸಚಿವರ ಹಂತದಲ್ಲಿ ಚರ್ಚೆ ನಡೆದಿದೆ. ಟೌನ್‌ಶಿಪ್‌ ನಿರ್ಮಾಣದ ಕುರಿತು ತಜ್ಞರಿಂದ ಕಾರ್ಯಸಾಧ್ಯತಾ ವರದಿ ಪಡೆಯಲು ನಿರ್ಧರಿಸಲಾಗಿದೆ. ವರದಿ ಬಂದ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ನಗರಾಭಿವೃದ್ಧಿ ಇಲಾಖೆ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಮೈಸೂರು ಸಂಸ್ಥಾನದ ಆಳ್ವಿಕೆ ನಡೆಸುತ್ತಿದ್ದ ಟಿಪ್ಪು ಸುಲ್ತಾನ್‌ ಉತ್ಕೃಷ್ಟ ಗುಣಮಟ್ಟದ ಕುದುರೆಗಳ ತಳಿ ಅಭಿವೃದ್ಧಿಗಾಗಿ ಈಗ ಪಟ್ಟಣವಾಗಿರುವ ಕುಣಿಗಲ್‌ನಲ್ಲಿ ‘ಕುಣಿಗಲ್‌ ಕುದುರೆ ಫಾರ್ಮ್‌’ ಆರಂಭಿಸಿದ್ದರು. ಪಶು ಸಂಗೋಪನಾ ಇಲಾಖೆ ಸ್ವಾಮ್ಯದಲ್ಲಿರುವ 421 ಎಕರೆ 23 ಗುಂಟೆ ವಿಸ್ತೀರ್ಣದಲ್ಲಿ ಕುದುರೆ ಫಾರ್ಮ್‌ ಇದೆ. ಅನೇಕ ವರ್ಷಗಳಿಂದ ಇದನ್ನು ಖಾಸಗಿಯವರು ಗುತ್ತಿಗೆ ಆಧಾರದಲ್ಲಿ ನಡೆಸುತ್ತಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಗುತ್ತಿಗೆ ನವೀಕರಿಸುವ ಪ್ರಕ್ರಿಯೆ ಆರಂಭವಾಗಿತ್ತು.
ಕಾಂಗ್ರೆಸ್‌ ಸರ್ಕಾರ ಬಂದ ಬಳಿಕ ಪ್ರಕ್ರಿಯೆಯನ್ನು ಕೈಬಿಡಲಾಗಿದೆ.  ಐತಿಹಾಸಿಕ ಕುದುರೆ ಫಾರ್ಮ್‌ ಅನ್ನು ಸ್ಥಗಿತಗೊಳಿಸಿ, ಟೌನ್‌ಶಿಪ್‌ ನಿರ್ಮಿಸುವ ಪ್ರಸ್ತಾವಕ್ಕೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಬಹುಕೋಟಿ ಬೆಲೆ ಬಾಳುವ ಜಮೀನನ್ನು ಅನ್ಯ ಉದ್ದೇಶಕ್ಕೆ ಪರಿವರ್ತಿಸುವುದರ ಹಿಂದೆ, ‘ರಹಸ್ಯ ಲಾಭ’ದ ಹಿತಾಸಕ್ತಿ ಕೆಲಸ ಮಾಡುತ್ತಿದೆ ಎಂಬ ಆಪಾದನೆಯೂ ಇದೆ.

ಅತಂತ್ರ ಸ್ಥಿತಿಯಲ್ಲಿ ಫಾರ್ಮ್‌: ವಿಜಯ್‌ ಮಲ್ಯ ಒಡೆತನದ ಯುನೈಟೆಡ್‌ ಬ್ರೀವರೀಸ್‌ ಸಮೂಹದ ಯುನೈಟೆಡ್‌ ರೇಸಿಂಗ್‌ ಆ್ಯಂಡ್‌ ಬ್ಲಡ್‌ಸ್ಟಾಕ್‌ ಬ್ರೀಡರ್ಸ್‌ ಲಿಮಿಟೆಡ್‌ಗೆ 30 ವರ್ಷಗಳಿಗೆ ಕುಣಿಗಲ್‌ ಕುದುರೆ ಫಾರ್ಮ್‌ ಅನ್ನು ಗುತ್ತಿಗೆಗೆ ನೀಡಲಾಗಿತ್ತು. ಗುತ್ತಿಗೆ ಅವಧಿ 2022ರ ಸೆಪ್ಟೆಂಬರ್‌ 30ಕ್ಕೆ ಕೊನೆಗೊಂಡಿತ್ತು.

ಹೊಸ ಗುತ್ತಿಗೆದಾರರನ್ನು ನೇಮಿಸಲು ಅಂತರರಾಷ್ಟ್ರೀಯ ಮಟ್ಟದ ಬಿಡ್‌ ಆಹ್ವಾನಿಸಲಾಗಿತ್ತು. ವಾರ್ಷಿಕ ₹1.16 ಕೋಟಿ ಕನಿಷ್ಠ ಗುತ್ತಿಗೆ ಶುಲ್ಕವನ್ನು ನಿಗದಿಪಡಿಸಲಾಗಿತ್ತು. ₹1.40 ಕೋಟಿಗೆ ವಿಲ್ಲೂ ಪೂನಾವಾಲಾ ಗ್ರೀನ್‌ಫೀಲ್ಡ್‌ ಫಾರ್ಮ್ಸ್‌ ಸಲ್ಲಿಸಿದ್ದ ಬಿಡ್‌ ಸ್ವೀಕೃತವಾಗಿತ್ತು. ಈ ಸಂಸ್ಥೆಗೆ 30 ವರ್ಷಗಳಿಗೆ ಕುದುರೆ ಫಾರ್ಮ್‌ ಅನ್ನು ಗುತ್ತಿಗೆಗೆ ನೀಡುವ ಪ್ರಕ್ರಿಯೆ ಆರಂಭವಾಗಿತ್ತು.

ಬಿಡ್‌ ಪ್ರಕ್ರಿಯೆ ಅಂತಿಮ ಹಂತದಲ್ಲಿರುವಾಗಲೇ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆದಿತ್ತು. ಬಿಜೆಪಿ ಅಧಿಕಾರ ಕಳೆದುಕೊಂಡು ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬಂತು.
2023ರ ಸೆಪ್ಟೆಂಬರ್‌ 29ರಂದು ಪಶುಪಾಲನಾ ಮತ್ತು ಪಶುವೈದ್ಯ ಇಲಾಖೆ ಆಯುಕ್ತರಿಗೆ ಪತ್ರ ಬರೆದಿರುವ ಪಶುಸಂಗೋಪನೆ ಮತ್ತು ಮೀನುಗಾರಿಕಾ ಇಲಾಖೆ ಕಾರ್ಯದರ್ಶಿ, ಕುಣಿಗಲ್‌ ಕುದುರೆ ಫಾರ್ಮ್‌ನ ಗುತ್ತಿಗೆ ಪ್ರಕ್ರಿಯೆಯನ್ನು ಕೈಬಿಟ್ಟಿರುವುದಾಗಿ ತಿಳಿಸಿದ್ದಾರೆ.

ರೇಸ್‌ಕೋರ್ಸ್‌ ಸ್ಥಳಾಂತರ:

ಬೆಂಗಳೂರು ಟರ್ಫ್‌ ಕ್ಲಬ್‌ನ ಚಟುವಟಿಕೆಗಳನ್ನು ಕುಣಿಗಲ್‌ ಕುದುರೆ ಫಾರ್ಮ್‌ಗೆ ಸ್ಥಳಾಂತರಿಸುವ ಪ್ರಸ್ತಾವ ರಾಜ್ಯ ಸರ್ಕಾರದ ಮುಂದಿದೆ.

ಈ ಉದ್ದೇಶಕ್ಕೆ ಕುದುರೆ ಫಾರ್ಮ್‌ನ ಜಮೀನನ್ನು ಗುತ್ತಿಗೆ ಆಧಾರದಲ್ಲಿ ಟರ್ಫ್‌ ಕ್ಲಬ್‌ಗೆ ಹಸ್ತಾಂತರಿಸಬೇಕಿರುವುದರಿಂದ ಟೆಂಡರ್‌ ಪ್ರಕ್ರಿಯೆಯನ್ನು ರದ್ದುಗೊಳಿ ಸಬೇಕು ಎಂದು ಪಶುಸಂಗೋಪನಾ ಇಲಾಖೆ ಕಾರ್ಯದರ್ಶಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಈ ಮೊದಲು ರಾಜ್ಯದಲ್ಲಿ ವಾಣಿಜ್ಯ ಉದ್ದೇಶದ ಕುದುರೆ ತಳಿ ಅಭಿವೃದ್ಧಿಯ 17 ಕೇಂದ್ರಗಳಿದ್ದವು. ಈಗ ಕುಣಿಗಲ್‌ ಕುದುರೆ ಫಾರ್ಮ್‌ ಮಾತ್ರ
ಉಳಿದಿದೆ.

‘ಕುಣಿಗಲ್‌ ಕುದುರೆ ಫಾರ್ಮ್‌ನಲ್ಲಿ 120 ಕಾಯಂ ಮತ್ತು 60 ಗುತ್ತಿಗೆ ನೌಕರರಿದ್ದಾರೆ. ಫಾರ್ಮ್‌ನ ಭವಿಷ್ಯದ ಕುರಿತು ಸರ್ಕಾರ ಸ್ಪಷ್ಟವಾದ ನಿರ್ಧಾರ ಕೈಗೊಳ್ಳಬೇಕು. ಇಲ್ಲವಾದರೆ ಕುದುರೆ ಸಾಕಾಣಿಕೆ ಮತ್ತು ತಳಿ ಸಂವರ್ಧನೆ ಚಟುವಟಿಕೆ ನಡೆಸುವುದು ಕಷ್ಟ’ ಎನ್ನುತ್ತಾರೆ ಯುನೈಟೆಡ್‌ ರೇಸಿಂಗ್‌ ಆ್ಯಂಡ್‌ ಬ್ಲಡ್‌ಸ್ಟಾಕ್‌ ಬ್ರೀಡರ್ಸ್‌ ಲಿಮಿಟೆಡ್‌ ವ್ಯವಸ್ಥಾಪಕ ನಿರ್ದೇಶಕ ಝೆಯ್ನ್‌ ಮಿರ್ಜಾ.

‘ಕುಣಿಗಲ್‌ ಜನರ ಹಿತಾಸಕ್ತಿಯೇ ಮುಖ್ಯ’

‘ಬೆಂಗಳೂರು ಟರ್ಫ್‌ ಕ್ಲಬ್‌ ಅನ್ನು ಕುಣಿಗಲ್‌ಗೆ ಸ್ಥಳಾಂತರಿಸಬೇಕೆಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಯೋಚನೆ. ಉಳಿದ ಜಮೀನಿನಲ್ಲಿ ಟೌನ್‌ಶಿಪ್‌ ನಿರ್ಮಿಸುವಂತೆ ನಾನು ಮತ್ತು ಸಂಸದರು ಪ್ರಸ್ತಾವ ಸಲ್ಲಿಸಿದ್ದೇವೆ. ಉದ್ಯೋಗ ಸೃಷ್ಟಿ ಮತ್ತು ತೆರಿಗೆ ವರಮಾನ ಹೆಚ್ಚಿಸುವುದು ನಮ್ಮ ಉದ್ದೇಶ’ ಎನ್ನುತ್ತಾರೆ ಕುಣಿಗಲ್‌ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಎಚ್‌.ಡಿ. ರಂಗನಾಥ್‌.

‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅವರು, ‘ವರ್ಷಕ್ಕೆ ₹1.40 ಕೋಟಿ ಶುಲ್ಕಕ್ಕೆ 421 ಎಕರೆ ಜಮೀನನ್ನು ಗುತ್ತಿಗೆಗೆ ನೀಡುವುದು ಯಾವ ನ್ಯಾಯ? ಕನಿಷ್ಠ ₹300 ಕೋಟಿ ತೆರಿಗೆ ಸಂಗ್ರಹಕ್ಕೆ ಪೂರಕವಾದ ಯೋಜನೆ ನಮ್ಮದು. 2,000ಕ್ಕಿಂತ ಹೆಚ್ಚು ಉದ್ಯೋಗ ಸೃಷ್ಟಿಯೂ ಆಗಲಿದೆ’ ಎಂದರು.

‘ಕುದುರೆ ಫಾರ್ಮ್‌ ಗುತ್ತಿಗೆಯ ಹಿಂದೆ ವ್ಯವಸ್ಥಿತ ಜಾಲವೇ ಇದೆ. ಕುದುರೆಗಳನ್ನು ಮಾರುಕಟ್ಟೆಯಲ್ಲಿ ಲಕ್ಷಾಂತರ ರೂಪಾಯಿಗೆ ಮಾರಿ ಹಣ ಗಳಿಸುವವರು ನಮ್ಮ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ಟೌನ್‌ಶಿಪ್‌ ಪ್ರಸ್ತಾವ ಕೈಬಿಡುವಂತೆ ಆಮಿಷ ಒಡ್ಡುವುದಕ್ಕೂ ಬಂದಿದ್ದರು’ ಎಂದು ದೂರಿದರು.

ಟೌನ್‌ಶಿಪ್‌ ನಿರ್ಮಿಸಿದರೆ ಯಾವುದೇ ಮಾಲಿನ್ಯಕಾರಕ ಕೈಗಾರಿಕೆಗಳಿಗೆ ಅವಕಾಶ ನೀಡುವುದಿಲ್ಲ. ಅಮೆರಿಕದ ಸಿಲಿಕಾನ್‌ ವ್ಯಾಲಿಯಲ್ಲಿದ್ದಂತೆ ಕಾರ್ಪೊರೇಟ್‌ ಕಚೇರಿಗಳ ಕೇಂದ್ರವನ್ನಾಗಿ ಅದನ್ನು ಪರಿವರ್ತಿಸುವ ಸ್ಪಷ್ಟ ಯೋಜನೆ ತಮ್ಮ ಮುಂದಿದೆ. ಕುಣಿಗಲ್‌ ಜನರಿಗೆ ಲಾಭ ತಂದುಕೊಡದ ಯಾವ ತೀರ್ಮಾನಕ್ಕೂ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.

‘ಭೂ ಕಬಳಿಕೆಯ ಸಂಚು’

‘ಕುಣಿಗಲ್‌ನ ಹವಾಮಾನದ ಕಾರಣದಿಂದ ಜಗತ್ತಿನಲ್ಲಿ ಅತ್ಯಂತ ಉತ್ಕೃಷ್ಟವಾದ ಕುದುರೆಗಳು ಇಲ್ಲಿ ಜನಿಸುತ್ತಿವೆ. ಈಗ ಬೆಂಗಳೂರು ಟರ್ಫ್‌ ಕ್ಲಬ್‌ ಹಾಗೂ ಕುದುರೆ ಫಾರ್ಮ್‌ನ ಜಮೀನುಗಳನ್ನು ಕಬಳಿಸಲು ವ್ಯವಸ್ಥಿತ ಸಂಚು ನಡೆಯುತ್ತಿದೆ’ ಎಂದು ಆರೋಪಿಸುತ್ತಾರೆ ಕುಣಿಗಲ್‌ನ ಮಾಜಿ ಶಾಸಕ ಬಿ.ಬಿ. ರಾಮಸ್ವಾಮಿ ಗೌಡ.

‘ದೊಡ್ಡಕೆರೆ, ರಾಮಬಾಣದ ಹಂತ, ಹೇರೂರು ಕಾವಲ್‌ ಮತ್ತು ಬೇಗೂರು ಕಾವಲ್‌ಗಳಲ್ಲೂ ಕುಣಿಗಲ್‌ ಕುದುರೆ ಫಾರ್ಮ್‌ಗೆ ಸೇರಿದ ಜಮೀನು
ಗಳಿವೆ. ಈ ಎಲ್ಲವುಗಳ ಮೇಲೂ ಕಣ್ಣುಬಿದ್ದಿದೆ. ಕುಣಿಗಲ್‌ ಪಟ್ಟಣವೇ ಇನ್ನೂ ಅಭಿವೃದ್ಧಿಯಾಗಿಲ್ಲ. ಇನ್ನೇಕೆ ಹೊಸ ಟೌನ್‌ಶಿಪ್‌? ಇದರ ಹಿಂದೆ ಯಾವ ಹಿತಾಸಕ್ತಿ ಇದೆ ಎಂಬುದು ಜನರಿಗೆ ಗೊತ್ತಿಲ್ಲವೆ’ ಎಂದು ಪ್ರಶ್ನಿಸಿದರು.

‘ಕುದುರೆ ಫಾರ್ಮ್‌ ಒಂದು ಪಾರಂಪರಿಕ ತಾಣ. ಅದನ್ನು ಸರ್ಕಾರವೇ ನಿರ್ವಹಿಸಲಿ. ಪೊಲೀಸ್‌ ಇಲಾಖೆಯ ಅಶ್ವದಳದ ಸುಪರ್ದಿಗೆ ನೀಡಲಿ. ಅದನ್ನು ಟೌನ್‌ಶಿಪ್‌ ಮಾಡಲು ಕುಣಿಗಲ್‌ ಜನರು ಅವಕಾಶ ನೀಡುವುದಿಲ್ಲ’ ಎಂದರು.

ಫಾರ್ಮ್‌ ರಕ್ಷಣೆಗೆ ದೇವೇಗೌಡರ ಆಗ್ರಹ

ಕುಣಿಗಲ್‌ ಕುದುರೆ ಫಾರ್ಮ್‌ ಜಮೀನಿನಲ್ಲಿ ಟೌನ್‌ಶಿಪ್‌ ನಿರ್ಮಿಸುವ ಯೋಜನೆಯನ್ನು ಕೈಬಿಡಬೇಕು. ಅದನ್ನು ಒಂದು ಪಾರಂಪರಿಕ ತಾಣ ಎಂದು ಘೋಷಿಸಿ, ಸಂರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯಸಭಾ ಸದಸ್ಯ ಎಚ್‌.ಡಿ. ದೇವೇಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದ್ದಾರೆ.

ಡಿಸೆಂಬರ್‌ 28ರಂದು ಮುಖ್ಯಮಂತ್ರಿಯವರಿಗೆ ಪತ್ರ ಬರೆದಿರುವ ಅವರು, 250 ವರ್ಷಗಳ ಇತಿಹಾಸವಿರುವ ಕುದುರೆ ಫಾರ್ಮ್‌ ಅಸ್ತಿತ್ವ ಕಳೆದುಕೊಳ್ಳಲು ಬಿಡಬಾರದು ಎಂದು ಒತ್ತಾಯಿಸಿದ್ದಾರೆ.

ಪ್ರಮುಖ ಘಟನಾವಳಿಗಳು

* ಸೆಪ್ಟೆಂಬರ್‌ 30, 2022– ಯುನೈಟೆಡ್‌ ರೇಸಿಂಗ್‌ ಆ್ಯಂಡ್‌ ಬ್ಲಡ್‌ಸ್ಟಾಕ್‌ ಬ್ರೀಡರ್ಸ್‌ ಲಿಮಿಟೆಡ್‌ಗೆ ನೀಡಿದ್ದ ಕುಣಿಗಲ್‌ ಕುದುರೆ ಫಾರ್ಮ್‌ ಗುತ್ತಿಗೆ ಅವಧಿ ಅಂತ್ಯ

* ಜನವರಿ 6, 2023– ಕುಣಿಗಲ್‌ ಕುದುರೆ ಫಾರ್ಮ್‌ ನಿರ್ವಹಣೆಗೆ ಅಂತರರಾಷ್ಟ್ರೀಯ ಮಟ್ಟದ ಬಿಡ್‌ ಆಹ್ವಾನ

* ಫೆಬ್ರುವರಿ 21, 2023– ವಿಲ್ಲೂ ಪೂನಾವಾಲಾ ಗ್ರೀನ್‌ಫೀಲ್ಡ್‌ ಫಾರ್ಮ್ಸ್‌ ಕಂಪನಿಯ ಹಣಕಾಸು ಬಿಡ್‌ ಅಂಗೀಕಾರ

* ಮಾರ್ಚ್‌ 20, 2023– ಬಿಡ್‌ ಅಂಗೀಕರಿಸಿದ ಹಣಕಾಸು ಇಲಾಖೆ, ಮುಂದಿನ ಕ್ರಮಕ್ಕಾಗಿ ಪಶುಸಂಗೋಪನಾ ಇಲಾಖೆಗೆ ಕಡತ ರವಾನೆ

* ಮಾರ್ಚ್‌ 27, 2023– ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಘೋಷಣೆ

* ನವೆಂಬರ್‌ 29, 2023– ಟೆಂಡರ್‌ ರದ್ದುಗೊಳಿಸಿ ಕನಿಷ್ಠ ಠೇವಣಿ ಮೊತ್ತ ಹಿಂದಿರುಗಿಸುವಂತೆ ಪಶುಸಂಗೋಪನಾ ಇಲಾಖೆ ಆಯುಕ್ತರಿಗೆ ಪಶುಸಂಗೋಪನಾ ಇಲಾಖೆ ಕಾರ್ಯದರ್ಶಿ ಪತ್ರ

* ಡಿಸೆಂಬರ್‌ 11, 2023– ಟೆಂಡರ್‌ ಪ್ರಕ್ರಿಯೆ ರದ್ದುಗೊಳಿಸಿರುವುದಾಗಿ ಪಶುಸಂಗೋಪನಾ ಇಲಾಖೆಯಿಂದ ಮಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT