ಪಾಂಡವಪುರ: ನಾಲೆಗೆ ಬಿದ್ದ ಬಸ್ ಅಪಘಾತದಲ್ಲಿ ಮೃತರಾದ ವದೆಸಮುದ್ರ ಗ್ರಾಮದ 8 ಜನರನ್ನು ಭಾನುವಾರ ಸಾಮೂಹಿಕವಾಗಿ ಅಂತ್ಯಕ್ರಿಯೆ ನಡೆಸಲಾಯಿತು.
ರವಿಕುಮಾರ್ (12), ಪ್ರಶಾಂತ್ (13), ಪವಿತ್ರಾ (12) ಹಾಗೂ ರತ್ನಮ್ಮ, ಶಶಿಕಲಾ, ಚಿಕ್ಕಯ್ಯ, ಕಮಲಮ್ಮ, ಕರಿಯಯ್ಯ ಅವರ ಮೃತದೇಹಗಳನ್ನು ಗ್ರಾಮದ ಜಮೀನಿನಲ್ಲಿ ಸಾಲಾಗಿ ಇರಿಸಿ, ಬೆಂಕಿ ಇಡಲಾಯಿತು.
ಮಮ್ಮಲ ಮರುಗಿದ ಗ್ರಾಮಸ್ಥರು ನೊಂದ ಕುಟುಂಬಗಳಿಗೆ ಅಳುತ್ತಲೇ ಸಾಂತ್ವನ ಹೇಳಿದರು. ಇಡೀ ಗ್ರಾಮವೇ ದುಃಖದ ಮಡುವಿನಲ್ಲಿ ಮುಳುಗಿತ್ತು.
‘ಇಂತಹ ದುರಂತ ಸಂಭವಿಸಬಾರದಿತ್ತು. ಎಂಟು ಮಂದಿಯನ್ನು ಕಳೆದುಕೊಂಡ ನಮಗೆ ಊಟ ಸೇರುತ್ತಿಲ್ಲ. ಆ ಡ್ರೈವರ್ ನಮ್ಮೂರಿನ ಜೀವಗಳನ್ನು ಬಲಿ ತೆಗೆದುಕೊಂಡು ಬಿಟ್ಟ’ ಎಂದು ಗ್ರಾಮದ ನಾಗರಾಜು, ರಾಜು, ಶಿವಯ್ಯ, ಮಹದೇವ ಕಣ್ಣೀರಾದರು.
ಹಿಡಿಶಾಪ: ವದೆಸಮುದ್ರ, ಚಿಕ್ಕಕೊಪ್ಪಲು ಹಾಗೂ ಕನಗನಮರಡಿ ಗ್ರಾಮದ ಜನರು ಖಾಸಗಿ ಬಸ್ಗೆ ಹಿಡಿಶಾಪ ಹಾಕುತ್ತಿದ್ದಾರೆ. ಈ ಭಾಗದಲ್ಲಿ ಸರ್ಕಾರಿ ಬಸ್ಗಳ ಸಂಖ್ಯೆ ಕಡಿಮೆ. ಬೆಳಿಗ್ಗೆ ಮತ್ತು ಸಂಜೆ ಮಾತ್ರ ಸಾರಿಗೆ ಬಸ್ಸು ಬರುತ್ತವೆ. ಉಳಿದಂತೆ ಬಹುತೇಕವಾಗಿ ಖಾಸಗಿ ಬಸ್ಗಳು ಇಲ್ಲಿ ಸಂಚರಿಸುತ್ತವೆ.
‘ಇಲ್ಲಿನ ರಸ್ತೆಗಳು ಹದಗೆಟ್ಟಿದ್ದು ಸಂಚಾರ ದುಸ್ತರವಾಗಿದೆ. ಈ ಕಾರಣಗಳಿಂದಲೇ ದುರಂತಗಳು ನಡೆಯುತ್ತಿವೆ. ರಸ್ತೆಗಳನ್ನು ಅಭಿವೃದ್ಧಿಪಡಿಸುವ ಮತ್ತು ಸಾರಿಗೆ ಬಸ್ ವ್ಯವಸ್ಥೆ ಮಾಡುವ ಪ್ರಯತ್ನವನ್ನು ಯಾವ ಜನಪ್ರತಿನಿಧಿಯೂ ಮಾಡುತ್ತಿಲ್ಲ’ ಎಂದು ಈ ಭಾಗದ ಗ್ರಾಮಗಳ ಜನರು ಬೇಸರ ವ್ಯಕ್ತಪಡಿಸಿದರು.