ಎಂಬಿಬಿಎಸ್- ಬಿಡಿಎಸ್ ಸೀಟು ಹಂಚಿಕೆ ತಾತ್ಕಾಲಿಕ ಪಟ್ಟಿ ರದ್ದು
ಬೆಂಗಳೂರು: ಎಂಬಿಬಿಎಸ್ ಮತ್ತು ಬಿಡಿಎಸ್ ಕೋರ್ಸ್ಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಕಳೆದ ಅಕ್ಟೋಬರ್ 24ರಂದು ಪ್ರಕಟಿಸಿದ್ದ ಮೂರನೇ ಸುತ್ತಿನ ಕೌನ್ಸೆಲಿಂಗ್ನ ತಾತ್ಕಾಲಿಕ ಹಂಚಿಕೆ ಪಟ್ಟಿಯನ್ನು ಹೈಕೋರ್ಟ್ ರದ್ದುಗೊಳಿಸಿದೆ. ಈ ಸಂಬಂಧ ಚಂದನಾ ಎಂ.ಚವಾಣ್ ಸೇರಿದಂತೆ 26 ವಿದ್ಯಾರ್ಥಿಗಳು ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳನ್ನು ನ್ಯಾಯಮೂರ್ತಿಗಳಾದ ಬಿ.ಎಂ.ಶ್ಯಾಮ್ ಪ್ರಸಾದ್, ಎಂ.ಐ.ಅರುಣ್ ಮತ್ತು ಟಿ.ಎಂ.ನದಾಫ್ ಅವರಿದ್ದ ತ್ರಿಸದಸ್ಯ ನ್ಯಾಯಪೀಠ ಭಾಗಶಃ ಮಾನ್ಯ ಮಾಡಿ ಈ ಕುರಿತಂತೆ ಆದೇಶಿಸಿದೆ. ‘ಮೂರನೇ ಸುತ್ತಿನ ಕೌನ್ಸೆಲಿಂಗ್ ಅನ್ನು ಹೊಸದಾಗಿ ಕೈಗೊಳ್ಳಬೇಕು. ತೀರ್ಪನ್ನು ನಿಮ್ಮ ವೆಬ್ಸೈಟ್ನಲ್ಲಿ ಪ್ರಕಟಿಸಬೇಕು’ ಎಂದು ಕೆಇಎಗೆ ನಿರ್ದೇಶಿಸಿದೆ.