ತೇವಾಂಶ ಹೆಚ್ಚಳ ಹಾಗೂ ವಾತಾವರಣದಲ್ಲಿ ಉಂಟಾಗುವ ಏರುಪೇರು ಈ ರೋಗಕ್ಕೆ ಕಾರಣವಾಗಿದೆ. ನವೆಂಬರ್ ಅಂತ್ಯದಲ್ಲಿ ಚಂಡಮಾರುತ ಬೀಸಿದ ಪರಿಣಾಮದಿಂದ ಮಳೆ ಸುರಿದು ವಾತಾವರಣ ತಂಪಾಗಿತ್ತು. ಹಲವು ದಿನ ಮೋಡ ಮುಸುಕಿದ ವಾತಾವರಣವಿದ್ದರಿಂದ ಎಲೆ ಚುಕ್ಕೆ ರೋಗ ಅಂಟಿಕೊಂಡಿತು. ಇದು ಈರುಳ್ಳಿ ಗೆಡ್ಡೆಯ ಬಣ್ಣದ ಮೇಲೆ ಪರಿಣಾಮ ಬೀರಿದೆ. ಮುಂಗಾರು ಹಂಗಾಮಿನಲ್ಲಿ ಈರುಳ್ಳಿ ಬೆಳೆ 90ರಿಂದ 110 ದಿನಗಳಲ್ಲಿ ಕೈಗೆ ಸಿಗುತ್ತದೆ. ಹಿಂಗಾರು ಹಂಗಾಮಿನಲ್ಲಿ ಕನಿಷ್ಠ 120 ದಿನಗಳಾದರೂ ಬೇಕಾಗುತ್ತದೆ. ನೀರಿನ ಅಭಾವದ ಕಾರಣಕ್ಕೆ ಚಿತ್ರದುರ್ಗದಲ್ಲಿ ಹಿಂಗಾರು ಹಂಗಾಮಿನಲ್ಲಿ ಈರುಳ್ಳಿ ಬಿತ್ತನೆ ಮಾಡುವುದು ಕಡಿಮೆ. ಆದರೆ, ಈ ವರ್ಷ ಈರುಳ್ಳಿಗೆ ನಿರೀಕ್ಷೆ ಮೀರಿದ ಬೆಲೆ ಸಿಕ್ಕಿದ್ದರಿಂದ ಹೆಚ್ಚು ರೈತರು ಈರುಳ್ಳಿಯತ್ತ ಒಲವು ತೋರಿದ್ದಾರೆ.