ಬೆಂಗಳೂರು: ಕ್ಯೂಆರ್ ಕೋಡ್ ಮತ್ತು ಹಸಿರು ಲೋಗೊ ಹೊಂದಿರುವ 'ಹಸಿರು ಪಟಾಕಿ' ಬಳಕೆಗಷ್ಟೇ ಅವಕಾಶ ಕಲ್ಪಿಸಲಾಗಿದೆ. ಈ ಕುರಿತು ಪರಿಷ್ಕೃತ ಆದೇಶ ಹೊರಡಿಸಿರುವ ಕಂದಾಯ ಇಲಾಖೆ, ಹೈಕೋರ್ಟ್ಗೆ ಶುಕ್ರವಾರ ಈ ಕುರಿತು ಪ್ರಮಾಣಪತ್ರ ಸಲ್ಲಿಸಿದೆ.
ಪಟಾಕಿ ಬಳಕೆ ನಿಷೇಧಿಸುವಂತೆ ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ಪರಿಷ್ಕೃತ ಆದೇಶದ ಪ್ರತಿ ಸಲ್ಲಿಸಿದರು. ಹೊಸ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ಸರ್ಕಾರಕ್ಕೆ ಆದೇಶಿಸಿತು.
ರಾಷ್ಟ್ರೀಯ ಪರಿಸರ ಮತ್ತು ಎಂಜಿನಿಯರಿಂಗ್ ಸಂಶೋಧನಾ ಪ್ರತಿಷ್ಠಾನ (ನೀರಿ) ಹಾಗೂ ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆ ರೂಪಿಸಿರುವ ಹಸಿರು ಲೋಗೊ ಇರುವ ಪಟಾಕಿಗಳನ್ನು ಮಾತ್ರ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ಪಟಾಕಿ ಬಾಕ್ಸ್ ಗಳ ಮೇಲೆ ಕ್ಯೂಆರ್ ಕೋಡ್ ಪ್ರಕಟಿಸುವುದನ್ನು ಕಡ್ಡಾಯಗೊಳಿಸಲಾಗಿದೆ.