ಎಷ್ಟು ವೆಚ್ಚ?: ಈ ಬಾರಿಯ ಫಲಪುಷ್ಪ ಪ್ರದರ್ಶನವನ್ನು ಅಂದಾಜು ₹ 20 ಲಕ್ಷ ವೆಚ್ಚದಲ್ಲಿ ಆಯೋಜಿಸಲಾಗುತ್ತಿದೆ. 2018 ಹಾಗೂ 2019ರಲ್ಲಿ ಸುರಿದ ಭಾರಿ ಮಳೆಯಿಂದ ರಾಜಾಸೀಟ್ ಉದ್ಯಾನಕ್ಕೆ ಹಾನಿಯಾಗಿತ್ತು. ಅಲ್ಲದೇ ಪಕ್ಕದಲ್ಲಿಯೇ ಇದ್ದ ಚಾಮುಂಡೇಶ್ವರಿ ನಗರದಲ್ಲಿ ಹಲವು ಮನೆಗಳೂ ಧರೆಗೆ ಉರುಳಿದ್ದವು. ಉದ್ಯಾನದಲ್ಲಿದ್ದ ಹೂವಿನ ರಾಶಿಯೂ ಕೊಳೆತು ಹೋಗಿತ್ತು. ಈಗ ಸಸ್ಯಕಾಶಿಯೂ ಹಸಿರಾಗಿದ್ದು, ಬೆಟ್ಟದ ಸಾಲು ಪ್ರವಾಸಿಗರ ಸೆಳಯುತ್ತಿದೆ. ಈಗ ಪ್ರವಾಸೋದ್ಯಮವೂ ಚೇತರಿಕೆಯತ್ತ ಹೆಜ್ಜೆ ಇಟ್ಟಿದೆ. ಹೀಗಾಗಿಯೇ, ಕೊಡಗು ಸಹಜ ಸ್ಥಿತಿಯತ್ತ ದಾಪುಗಾಲು ಇಡುತ್ತಿದ್ದು, ಪ್ರವಾಸೋದ್ಯಮವನ್ನೇ ನಂಬಿದವರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.