ರಾಮನಗರ: ‘ಆಯೋಧ್ಯೆಯಲ್ಲಿ ನಿರ್ಮಾಣವಾಗಿರುವ ರಾಮಮಂದಿರವು ದೇಶದ ಪ್ರತಿಯೊಬ್ಬರಿಗೂ ಸೇರಿದ್ದು. ಅದರ ಉದ್ಘಾಟನೆಗೆ ಯಾರಿಗೂ ಪ್ರತ್ಯೇಕವಾಗಿ ಆಹ್ವಾನ ಕೊಡುವ ಅಗತ್ಯವಿಲ್ಲ. ಯಾರು ಬೇಕಾದರೂ ಹೋಗಬಹುದು’ ಎಂದು ಕೇಂದ್ರ ಬೃಹತ್ ಕೈಗಾರಿಕ ಖಾತೆಯ ರಾಜ್ಯ ಸಚಿವ ಕೃಷ್ಣಪಾಲ್ ಗುರ್ಜರ್ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮಮಂದಿರ ಉದ್ಘಾಟನೆಗೆ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಸೇರಿದಂತೆ, ಕಾಂಗ್ರೆಸ್ ನಾಯಕರಿಗೆ ಆಹ್ವಾನ ನೀಡದಿರುವ ಕುರಿತ ಪ್ರಶ್ನೆಗೆ ಮೇಲಿನಂತೆ ಪ್ರತಿಕ್ರಿಯಿಸಿದರು.
‘ರಾಮಮಂದಿರವು ಬಿಜೆಪಿಗೆ ಮಾತ್ರ ಸೇರಿದ್ದಲ್ಲ. ಅದು ಪ್ರತಿಯೊಬ್ಬ ಭಾರತೀಯನ ನೂರಾರು ವರ್ಷಗಳ ಕನಸು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು, ಜನರಿಗೆ ಕೊಟ್ಟ ಮಾತಿನಂತೆ ಅದನ್ನು ಸಾಕಾರಗೊಳಿಸಿದೆ’ ಎಂದರು.
ಮೋದಿಯೇ ಅಭ್ಯರ್ಥಿ: ‘ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಯಾರಾಗಲಿದ್ದಾರೆ?’ ಎಂಬ ಪ್ರಶ್ನೆಗೆ, ‘ಪಕ್ಷದ ವರಿಷ್ಠರು ಅದನ್ನು ನಿರ್ಧರಿಸಲಿದ್ದಾರೆ. ಸೀಟು ಹಂಚಿಕೆಯಾಗುವವರೆಗೆ ಮೋದಿ ಅವರೇ ಅಭ್ಯರ್ಥಿ. ಅವರಿಗಾಗಿ ಪಕ್ಷದ ಕಾರ್ಯಕರ್ತರು ಕೆಲಸ ಮಾಡಬೇಕು’ ಎಂದು ಪಕ್ಕದಲ್ಲಿದ್ದ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಅವರತ್ತ ನೋಡಿ ಹೇಳಿದರು.